
ಬೆಳ್ತಂಗಡಿ: ರಾಜ್ಯ ಸರ್ಕಾರವು ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದು ಕೇವಲ ಸಾಂಸ್ಕೃತಿಕ ವಿಜಯವಲ್ಲ,ಇದು ಭಾಷಾ ಅಸ್ಮಿತೆ, ಕಾನೂನಾತ್ಮಕ ಮಾನ್ಯತೆ ಮತ್ತು ಆಡಳಿತಾತ್ಮಕ ಒಳಗೊಳ್ಳುವಿಕೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದು ತುಳು ಕೂಟ ಮೂಡುಬಿದಿರೆ ಉಪಾಧ್ಯಕ್ಷೆ ಶ್ವೇತಾ ಜೈನ್ ತಿಳಿಸಿದ್ದಾರೆ.
ಇದು ಕರಾವಳಿಗರ ಬಹುದಿನಗಳ ಆಶಯವೂ ಆಗಿದೆ. ಸಾವಿರಾರು ವರ್ಷಗಳ ಶ್ರೀಮಂತ ಭಾಷಾ ಪರಂಪರೆಯನ್ನು ಹೊಂದಿರುವ ತುಳು ಭಾಷೆಗೆ ಸೂಕ್ತ ಮಾನ್ಯತೆ ದೊರಕಬೇಕೆಂಬ ಉದ್ದೇಶದಿಂದ ಹಲವು ವರ್ಷಗಳಿಂದ ತುಳುಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಹಾಗೂ ಕರಾವಳಿಯ ಜನರು ನಡೆಸಿಕೊಂಡು ಬಂದ ನಿರಂತರ ಪ್ರಯತ್ನಗಳಿಗೆ ಇಂದು ಫಲ ದೊರೆತಿದೆ. ಈ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದರು.
ಮುಂದಿನ ದಿನಗಳಲ್ಲಿ ತುಳು ಭಾಷೆಯ ಆಡಳಿತಾತ್ಮಕ ಬಳಕೆಯ ಪರಿಣಾಮಕಾರಿ ಅನುಷ್ಠಾನದ ಜೊತೆಗೆ ಶಿಕ್ಷಣ, ಸಾಹಿತ್ಯ, ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ತುಳು ಭಾಷೆಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ನಮ್ಮ ಮುಂದಿನ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಗುರಿ ತುಳು ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವುದಾಗಿರಬೇಕು. ಇದರಿಂದ ತುಳು ಭಾಷೆಗೆ ರಾಷ್ಟ್ರೀಯ ಮಟ್ಟದಲ್ಲಿ ಸಂವಿಧಾನಾತ್ಮಕ ಮಾನ್ಯತೆ ದೊರೆಯುವಂತಾಗುತ್ತದೆ ಎಂದು ಶ್ವೇತಾ ಜೈನ್ ಹೇಳಿದರು.











