ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ಕಿಂಡಿ ಅಣೆಕಟ್ಟಿನ ಸಮೀಪದ ರಸ್ತೆ ಬದಿಯಲ್ಲಿ ಭಾರಿ ಪ್ರಮಾಣದ ತ್ಯಾಜ್ಯವನ್ನು ತಂದು ಸುರಿದಿರುವ ಘಟನೆ ಬೆಳಕಿಗೆ ಬಂದಿದೆ.
ಗೋಣಿಚೀಲಗಳಲ್ಲಿ ತುಂಬಿಸಿ ತಂದ ತ್ಯಾಜ್ಯವನ್ನು ರಸ್ತೆ ಬದಿಗೆ ಎಸೆದಿರುವುದರಿಂದ ಪರಿಸರ ಮಾಲಿನ್ಯದ ಜತೆಗೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಈ ತ್ಯಾಜ್ಯ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಸಮೀಪದಲ್ಲೇ ಹರಿಯುವ ಮೃತ್ಯುಂಜಯ ನದಿಗೆ ಸೇರುವ ಸಾಧ್ಯತೆ ಇದೆ.ಈ ಪ್ರದೇಶದಲ್ಲಿ ಈ ಹಿಂದೆ ತ್ಯಾಜ್ಯ ಸುರಿಯುವುದನ್ನು ತಡೆಯುವ ಉದ್ದೇಶದಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ಸದ್ಯ ಕಣ್ಮರೆಯಾಗಿರುವುದು ಕಸ ಎಸೆಯುವವರಿಗೆ ಅನುಕೂಲ ಕಲ್ಪಿಸಿದೆ.













