ಉಜಿರೆ: “ನಮ್ಮ ಹಿರಿಯರು ಹೊಟ್ಟೆಪಾಡಿಗಾಗಿ ದುಡಿದ ಕಥೆಯನ್ನು ನೆನಪಿಸುವ ದಿನವೇ ಇಂದಿನ ‘ಆಟಿಡೊಂಜಿ ದಿನ’ದ ಹಿನ್ನೆಲೆಯಾಗಿದೆ,” ಎಂದು ಉಜಿರೆ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ರವೀಶ್ ಪಡುಮಲೆ ಹೇಳಿದರು.
ಇವರು ಆ. 10ರಂದು ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ನಡೆದ ‘ಆಟಿಡೊಂಜಿ ದಿನ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಆಟಿ ತಿಂಗಳ ಸಂಪ್ರದಾಯಗಳು, ಆಟಿ ಕಳೆಂಜನ ಕಥೆ ಹಾಗೂ ಆಟಿ ಅಮಾವಾಸ್ಯೆ ಆಚರಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮೌಲ್ಯಯುತ ಮಾಹಿತಿ ನೀಡಿದರು.
ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ ಮನೆ ಮಾಡಿತ್ತು. ತೆಂಗಿನ ಗರಿಗಳಿಂದ ತಯಾರಿಸಿದ ವಿವಿಧ ಕಲಾಕೃತಿಗಳು ಹಾಗೂ ಅಲಂಕಾರಗಳಿಂದ ಶಾಲೆಯು ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಶಾಲೆಯ ಮೂಲೆ ಮೂಲೆಗಳಲ್ಲಿಯೂ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರ ವೈವಿಧ್ಯವನ್ನು ಬಿಂಬಿಸುವ ವಿವಿಧ ಭಕ್ಷ್ಯ-ಭೋಜ್ಯಗಳು ಹಾಗೂ ಆಟಿಯಲ್ಲಿ ಆಡುವ ವಿಶೇಷ ದೇಸಿ ಆಟಗಳು ಗಮನ ಸೆಳೆದವು.
ವಿದ್ಯಾರ್ಥಿಗಳಿಂದ ತುಳುನಾಡು ಮತ್ತು ತುಳು ಭಾಷೆಗೆ ಸಂಬಂಧಿಸಿದ ಹಾಡುಗಳು, ಗಾದೆಗಳು, ಸಂಧಿ ಪಾಡ್ದನ, ನಾಟಕ ಹಾಗೂ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಭಿತ್ತಿಪತ್ರಿಕೆಗಳ ಪ್ರದರ್ಶನವೂ ನಡೆಯಿತು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಎಂ. ಶ್ರದ್ಧಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ. ಸ್ವಾಗತಿಸಿದರು.













