August 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಅತ್ಯಂತ ಸೂಕ್ಷ್ಮ ವಿಚಾರ. ಈ ವರದಿ ಅನುಷ್ಠಾನಗೊಂಡರೆ ಪಶ್ಚಿಮ ಘಟ್ಟದ ಬಹುತೇಕರ ಬದುಕು ಬೀದಿಗೆ ಬರಲಿದೆ. ಏಳನೇ ಬಾರಿ ವರದಿ ಜಾರಿಗೆ ಕೇಂದ್ರ ಸರ್ಕಾರದಿಂದ ಒತ್ತಡ ಬಂದಿದೆ. ಆದರೆ ವರದಿಯಲ್ಲಿನ ಕೆಲ ಲೋಪಗಳ ಆಧಾರದಲ್ಲಿ ಅನುಷ್ಟಾನ ಮಾಡದಂತೆ ಕೇಂದ್ರಕ್ಕೆ ತಿರಸ್ಕಾರದ ಪ್ರಸ್ತಾವನೆ ಕಳಿಸಲು ಹಾಗೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವನ್ನು ಕೇಂದ್ರಕ್ಕೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಲು ಬದ್ಧವಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಬೆಳ್ತಂಗಡಿ ತಾಲೂಕು ಇದರ ಸಂಚಾಲಕರಾದ ರಕ್ಷಿತ್ ಶಿವರಾಂ ಹೇಳಿದರು.

ಅವರು ಆ.14ರಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಬೆಳ್ತಂಗಡಿ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮಾಧವ್ ಗಾಡೀಳ್ ಗಾಡ್ಗಿಲ್ ವರದಿಯ ಲೋಪ ಸರಿದೂಗಿಸಲು ಕಸ್ತೂರಿ ರಂಗನ್ ನೇತೃತ್ವದ ಸಮಿತಿಗೆ ವರದಿ ನೀಡುವಂತೆ ಅಂದಿನ ಕೇಂದ್ರ ಸರ್ಕಾರ ಸೂಚಿಸಿತ್ತು. ಆದರೆ ಕಸ್ತೂರಿ ರಂಗನ್ ವರದಿ, ಪಶ್ಚಿಮ ಘಟ್ಟದ ಜನರನ್ನು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡಿದೆ. ವರದಿಯಲ್ಲಿ ‘ ಎಕೋ ಸೆನ್ಸಿಟಿವ್ ಏರಿಯಾ’ ಗಳನ್ನು ಗುರುತಿಸಿರುವ ಮಾನದಂಡದ ಬಗ್ಗೆ ಅಪಸ್ವರಗಳಿದೆ. ಕೆಲ ಭೂಭಾಗವನ್ನು ಅವೈಜ್ಞಾನಿಕ ವಾಗಿ ಪರಿಸರ ಸೂಕ್ಷ್ಮಪ್ರದೇಶವೆಂದು ಗುರುತಿಸಲಾಗಿದೆ ಎಂಬ ಆರೋಪವಿದೆ.

ಕೇಂದ್ರ ಸರಕಾರ ಏಳನೇ ಬಾರಿಗೆ ಕಸ್ತೂರಿ ರಂಗನ್ ವರದಿಯ ಬಗ್ಗೆ ಏಳನೇ ಬಾರಿಗೆ ಅಧಿಸೂಚನೆಯನ್ನು ಹೊರಡಿಸಿದೆ. ದ.ಕ. ಜಿಲ್ಲೆಯ 44 ಗ್ರಾ.ಪಂ.ಗಳು ಸೇರಿದಂತೆ ರಾಜ್ಯದ 1449 ಗ್ರಾಮಗಳು ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಗೆ ಬರುತ್ತಿದೆ. ಕಸ್ತೂರಿ ರಂಗನ್‌ ವರದಿಯಲ್ಲಿ ಗ್ರಾಮಗಳನ್ನು ಪೂರ್ಣವಾಗಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುತ್ತಿದ್ದು ಇದರಿಂದಾಗಿ ಇಡೀ ಗ್ರಾಮದ ನಿವಾಸಿಗಳು ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಹಿಂದೆ ಪ್ರತಿಬಾರಿಯೂ ಕೇಂದ್ರ ಸರಕಾರ ಕರಡು ಅಧಿಸೂಚನೆಯನ್ನು ಹೊರಡಿಸಿದಾಗಲೂ ರಾಜ್ಯಸರಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹಿಂದೆ ಬಿ ರಮಾನಾಥ ರೈ ಅವರು ಅರಣ್ಯ ಸಚಿವರಾಗಿದ್ದಾಗ ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು ಆದರೆ ಕೇಂದ್ರ ಸರಕಾರ ಮತ್ತೆ ಮತ್ತೆ ಈ ಕಡರಡು ಅಧಿಸೂಚನೆಯನ್ನು ಪ್ರಕಟಿಸುತ್ತಲೇ ಇದೆ. ಈ ಬಗ್ಗೆ ರಾಜ್ಯದ ಜನರು ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಇನ್ನಾದರೂ ಕೇಂದ್ರ ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅಧಿಸೂಚನೆಯನ್ನು ಹಿಂಪಡೆಯಬೇಕಾಗಿದೆ. ಕಸ್ತೂರಿ ರಂಗನ್ ವರದಿ ಯ ಬಗ್ಗೆ ಜನರ ನಡುವೆ ತೀವ್ರ ಭಯ ಕಾಡಲಾರಂಭಿಸಿದೆ. ಇದನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.

ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಕೇಂದ್ರ ಸರಕಾರ ಮತ್ತೆ ಮತ್ತೆ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದು ಈ ಭಾಗದ ಸಂಸದರುಗಳು,ಶಾಸಕರು ಈ ಬಗ್ಗೆ ಜನರಿಗಾಗುವ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡುವ ಕಾರ್ಯವನ್ನೂ ಮಾಡಬೇಕು ಎಂದರು.

ಹೋರಾಟ ಸಮಿತಿಯ ಸಹ ಸಂಚಾಲಕರಾದ ಶೇಖರ್ ಲಾಯಿಲ ಹಾಗೂ ಬಿ.ಎಂ ಭಟ್ ಅವರು ಹೋರಾಟ ಸಮಿತಿಯ ಪ್ರಮುಖ ಬೇಡಿಕೆಗಳನ್ನು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕರಾದ ಗಣೇಶ್ ಕಣಾಲು, ಜಯಾನಂದ ಪಿಲಿಕಲ, ಎಂ.ಕೆ. ಪ್ರಸಾದ್, ಅಶ್ರಫ್‌ ನೆರಿಯ, ಪಿಟಿ ಸಬಾಸ್ಟಿನ್ ಕಳೆಂಜ, ಲೋಕೇಶ್ವರಿ ವಿನಯಚಂದ್ರ, ಲಕ್ಷ್ಮಣ ಗೌಡ, ಪ್ರಶಾಂತ್ ವೇಗಸ್, ರಮಾನಂದ ಸಾಲಿಯಾನ್, ನೇಮಿರಾಜ್ ಕಿಲ್ಲೂರ್, ದೀಪಕ್ ಎಚ್.ಡಿ. ನಾಲ್ಕೂರು, ಲಕ್ಷ್ಮಣ ನೆರಿಯ, ಸುಕುಮಾರ್, ಚಿದಾನಂದ ಪೂಜಾರಿ ಎಲ್ದಕ್ಕ ಉಪಸ್ಥಿತರಿದ್ದರು.

Related posts

ನೆರಿಯ: ಹಿರಿಯ ದೈವ ನರ್ತಕ ತನಿಯಪ್ಪ ನಲಿಕೆ ನಿಧನ

Suddi Udaya

ಮಡಂತ್ಯಾರು ಬಸವನಗುಡಿ ಒಕ್ಕೂಟದ ವತಿಯಿಂದ ಬಸವೇಶ್ವರ ದೇವರಿಗೆ ಸಿಯಾಳಭಿಷೇಕ

Suddi Udaya

ನಡ ಸರ್ಕಾರಿ ಪದವಿಪೂರ್ವ ಕಾಲೇಜು: ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ರವರಿಂದ ರೋಡ್ ಶೋ: ಗಣ್ಯರ ಭೇಟಿ

Suddi Udaya

ಬೆಳ್ತಂಗಡಿ: ಮಠದಬೈಲು ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಬಾರಿಕೆ ವಳಾಲ್ ಬಸದಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ : ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಮಠದ ವತಿಯಿಂದ ಗೌರವ

Suddi Udaya
error: Content is protected !!