ಕಪುಚಿನ್ ಕೃಷಿಕ್ ಸೇವಾ ಕೇಂದ್ರ (ರಿ) ನ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಭಾರತದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.
ದಯಾ ಶಾಲೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ ದ್ವಜಾರೋಹಣವನ್ನು ನೆರವೇರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಯಾ ಶಾಲೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಸ್ಕರೇನಸ್ ವಹಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬೆಳ್ತಂಗಡಿ ಸೈಂಟ್ ಲಾರೆನ್ಸ್ ಚರ್ಚ್ ಧರ್ಮಗುರು ವಂ.ಫಾ.ಜೋಸ್ ಆಯಾಂಕುಡಿ, ಸೆಲ್ವಿನ್ ಮಸ್ಕರೇನಸ್, ದಯಾ ವಿಶೇಷ ಶಾಲೆಯ ಹಿತೈಷಿಗಳು, ಸಹೃದಯ ದಾನಿಗಳಾದ ಸೋಫಿಯಾ ಕ್ಲಾರಾ ಡಿಸೋಜಾ, ಬೊನವೆಂಚರ್ ಡಿಸೋಜಾ, ಪೋಷಕರ ಪ್ರತಿನಿಧಿಯಾದ ಶುಭಕರ್, ಮಕ್ಕಳ ಪ್ರತಿನಿಧಿ ದಿಶಾ ಹಾಗೂ ದಿವ್ಯಾ ಟಿ ವಿ, ಮುಖ್ಯೋಪಾಧ್ಯಾಯರು ದಯಾ ವಿಶೇಷ ಶಾಲೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತದ ಸಂವಿಧಾನ ಪುಸ್ತಕಕ್ಕೆ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ಪುಷ್ಪಾರ್ಚನೆಯನ್ನು ಮಾಡುವ ಮೂಲಕ ವಂ.ಫಾ.ಜೋಸ್ ಆಯಾಂಕುಡಿ, ಧರ್ಮಗುರುಗಳು, ಸೈಂಟ್ ಲಾರೆನ್ಸ್ ಚರ್ಚ್, ಬೆಳ್ತಂಗಡಿ ಇವರು ನೆರವೇರಿಸಿದರು.
ವಂ.ಫಾ.ಜೋಸ್ ಆಯಾಂಕುಡಿ ಮಾತನಾಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು, ನಮ್ಮ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಸುತ್ತಿರುವ ಎಲ್ಲಾ ಸಂಸ್ಥೆಗಳು, ಅಧಿಕಾರಿಗಳು, ನೇತಾರರು ಮುಂತಾದವರನ್ನು ಸ್ಮರಿಸಿದರು. ದೇಶವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಶಕ್ತಿಯನ್ನು ದೇವರು ನಮಗೆಲ್ಲರಿಗೂ ನೀಡಲೆಂದು ಪ್ರಾರ್ಥಿಸುತ್ತಾ, ದಯಾ ವಿಶೇಷ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ನಿರ್ವಹಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು.
ದಿಶಾ ಶಾಲಾ ವಿದ್ಯಾರ್ಥಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರುತ್ತಾ, ದೇಶಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ, ದೇಶದ ಒಳಿತಿಗಾಗಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ದಯಾ ಶಾಲೆಯ ಒಳಿತಿಗಾಗಿ ಶ್ರಮಿಸಿದ ಸೆಲ್ವಿನ್ ಮಸ್ಕರೇನಸ್ ರವರಿಗೆ ದಯಾ ವಿಶೇಷ ಶಾಲೆಯ ಮಕ್ಕಳಿಗಾಗಿ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಅವರ ಪರಿಶ್ರಮವನ್ನು ನೆನಪಿಸಿಕೊಂಡು, ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಾತನಾಡಿದ, ಸೆಲ್ವಿನ್ ಮಸ್ಕರೇನಸ್ ರವರು, ದಯಾ ಶಾಲೆಯ ನಿರ್ದೇಶಕರು ಮತ್ತು ಎಲ್ಲಾ ಸಿಬ್ಬಂದಿವರ್ಗದವರನ್ನು ಶ್ಲಾಘಿಸಿ, ಅವರು ಮಾಡುತ್ತಿರುವ ಎಲ್ಲಾ ಸೇವೆಗಳಿಗೂ ವಂದಿಸಿದರು. ತಾವು ತಮ್ಮಿಂದಾದ ಸಹಾಯವನ್ನು ತಮ್ಮ ಸಂಬಂಧಿಯೊಬ್ಬರ ಸಹಾಯದಿಂದ ಮೊದಲಿನಿಂದಲೂ ಮಾಡುತ್ತಾ ಬಂದಿದ್ದು ಅವರು ಇಂದು ಮೃತರಾಗಿ ನಮ್ಮಿಂದ ಅಗಲಿದ್ದಾರೆ. ತನಗೆ ಇಂದು ಸಲ್ಲಿಸಿದ ಈ ಗೌರವವನ್ನು ಅವರಿಗೆ ಅರ್ಪಿಸುವುದಾಗಿ ತಿಳಿಸುತ್ತಾ, ಮುಂದಿನ ದಿನಗಳಲ್ಲೂ ತಮ್ಮ ಸಹಾಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಂ.ಫಾ.ವಿನೋದ್ ಮಸ್ಕರೇನಸ್ ರವರು ಮಾತನಾಡಿ, ನಾವು ನಮ್ಮ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳುವ ದಿನ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ನಮ್ಮಿಂದಾದ ಸೇವೆಯನ್ನು ದೇಶಕ್ಕಾಗಿ ಮಾಡಬೇಕು. ಇಂದಿನ ಯುವಕರು ಸೇನೆಗೆ ಸೇರಬೇಕು. ಸ್ವತಂತ್ರವಾಗಿ ಇಂದು ಜೀವಿಸಬೇಕಾದರೆ ಸ್ವಾತಂತ್ರ್ಯ ಹೋರಟವೇ ನಮಗೆ ಪ್ರೇರಣೆಯಾಗಿದೆ. ಅಪಾರ ಪ್ರಯತ್ನಗಳ ಮೂಲಕ ನಮಗೆ ಸ್ವಾತಂತ್ರ್ಯ ದೊರಕಿದೆ. ಮೂಲಭೂತ ಹಕ್ಕುಗಳು ಎಲ್ಲರಿಗೂ ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸೈಂಟ್.ಲೋರೆನ್ಸ್ ಚರ್ಚ್, ಬೆಳ್ತಂಗಡಿಯ ಮಾತೃವೇದಿಯ ಸಂಯೋಜಕರಾದ ಸಿಸ್ಟರ್. ಅಲ್ಫೋನ್ಸಾ ಹಾಗೂ ಸಂಘದ ಪದಾಧಿಕಾರಿಗಳು, ಚರ್ಚ್ ಯುವ ವೇದಿಕೆಯ ಪದಾಧಿಕಾರಿಗಳು ತಮ್ಮ ಧರ್ಮಗುರುಗಳ ನೇತ್ರತ್ವದಲ್ಲಿ ಒಟ್ಟುಗೂಡಿಸಿದ ಸಹಾಯಧನವನ್ನು ಸಂಸ್ಥೆಯ ನಿರ್ದೇಶಕರು ಮತ್ತು ಮಕ್ಕಳಿಗೆ ಹಸ್ತಾಂತರಿಸಿದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ದಯಾ ವಿಶೇಷ ಶಾಲೆಯ ಮಕ್ಕಳಿಂದ ದೇಶಭಕ್ತಿಯನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ 70 ಮಂದಿ ಪೋಷಕರು ಮತ್ತು ಹಿತೈಷಿಗಳು ಹಾಗೂ 116 ವಿಶೇಷ ಚೇತನ ಮಕ್ಕಳು, 45 ಸಿಬ್ಬಂದಿಗಳು ಭಾಗವಹಿಸಿದ್ದರು. ವಿಶೇಷ ಶಿಕ್ಷಕಿ ಶ್ರೀಮತಿ ರಶ್ಮಿ ಯವರು ಸರ್ವರನ್ನು ಸ್ವಾಗತಿಸಿ, ಶಿಕ್ಷಕಿ ಕುಮಾರಿ. ಪ್ರಿಯಾ ವಂದಿಸಿ, ಶಿಕ್ಷಕಿ ಕುಮಾರಿ ಜೋನ್ಸಿಲ್ಲಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು.












