ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಶಾಂತಿವನ ಧರ್ಮಸ್ಥಳದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಕಾರ್ಪೊರೇಟರ್ ವಾಸುದೇವ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ, ಸ್ವಾತಂತ್ರ್ಯವು ಕೇವಲ ಬಂಧನಗಳಿಂದ ಮುಕ್ತಿಯಾಗುವುದಲ್ಲ; ಆರೋಗ್ಯವಂತ, ಜವಾಬ್ದಾರಿಯುತ ಮತ್ತು ಸದೃಢ ಸಮಾಜವನ್ನು ನಿರ್ಮಿಸುವ ಸ್ವಾತಂತ್ರ್ಯವೂ ಆಗಿದೆ” ಎಂದು ಹೇಳಿದರು. ದೇಶದ ಪ್ರಗತಿಗೆ ಆರೋಗ್ಯವಂತ ನಾಗರಿಕರು ಅತ್ಯಂತ ಮುಖ್ಯವಾಗಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಾಳಜಿಯೊಂದಿಗೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಶಾಂತಿವನದ ಸಾಧಕರಾದ ಬೆಂಗಳೂರಿನ ವೆಂಕಟೇಶ್ ಉಪಸ್ಥಿತರಿದ್ದರು.
ಶಾಂತಿವನ ಆಸ್ಪತ್ರೆಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಡಾ. ಗೋವಿಂದನ್ ಮಾತನಾಡಿ, ಆರೋಗ್ಯದ ಕುರಿತು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯನ್ನು ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಸ್ವತಂತ್ರ ಭಾರತದ ನಾಗರಿಕರ ಮಹತ್ವವನ್ನು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಶಾಂತಿವನದ ಸಾಧಕ ಅಗ್ರಹಾರ ಶಿರದ ಮಾಜಿ ಸೈನಿಕರಾದ ಕಂಠೇಗೌಡ ಅವರನ್ನು ಅವರ ದೇಶ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಜಗನ್ನಾಥ್, ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ಬಿಂದು, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್, ಶಾಂತಿವನದ ಪ್ರಬಂಧಕ ಸ್ವಸ್ತಿಕ್, ಶಾಂತಿವನದ ವೈದ್ಯಾಧಿಕಾರಿಗಳು, ವೈದ್ಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಸಾಧಕರು ಉಪಸ್ಥಿತರಿದ್ದರು.
ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ಬಿಂದು ವಂದಿಸಿ, ಡಾ. ಅನನ್ಯ ನಿರೂಪಿಸಿದರು.












