ಕಕ್ಯಪದವು: ಎಲ್.ಸಿ.ಆರ್ ವಿದ್ಯಾ ಸಂಸ್ಥೆಯಲ್ಲಿ ನಶಾಮುಕ್ತ ಭಾರತ ಅಭಿಯಾನ ಮತ್ತು ಮಿಷನ್ ಸ್ಪಂದನದ ಅಂಗವಾಗಿ “10 ಕೋಟಿ ನಶಾಮುಕ್ತ ಪ್ರತಿಜ್ಞೆಗಳ ಮಹಾ ಅಭಿಯಾನ” ನಶಾಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ನಶಾಮುಕ್ತ ಭಾರತ ಅಭಿಯಾನ ಹಾಗೂ ಮಿಷನ್ ಸ್ಪಂದನದ ಅಂಗವಾಗಿ ಈಶ್ವರಿ ವಿಶ್ವವಿದ್ಯಾನಿಲಯದ ಮೆಡಿಕಲ್ ವಿಂಗ್, ರಾಜಯೋಗ ಎಜುಕೇಷನ್ ಮತ್ತು ರೀಸಚ್೯ ಫೌಂಡೇಶನ್ ಬ್ರಹ್ಮಾಕುಮಾರೀಸ್, ಶಿವಸನ್ನಿಧಿ ,ಕಾವಲಕಟ್ಟೆ ಇವರ ಆಯೋಜನೆಯಲ್ಲಿ ಎಲ್.ಸಿ.ಆರ್ ವಿದ್ಯಾಸಂಸ್ಥೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ನಶಾಮುಕ್ತ ಪ್ರತಿಜ್ಞಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ದೇಶಾದ್ಯಂತ ದಾದಿ ಪ್ರಕಾಶಮಣಿಜೀ ಅವರ ಪವಿತ್ರ ಸ್ಮರಣೆಯಲ್ಲಿ 10 ಕೋಟಿ ಜನರಿಂದ ನಶಾಮುಕ್ತ ಜೀವನದ ಪ್ರತಿಜ್ಞೆ ಸ್ವೀಕರಿಸುವ ಮಹತ್ವದ ಗುರಿಯನ್ನು ಹೊಂದಿ, ರಾಜಯೋಗಿನಿ ಬ್ರಹ್ಮಕುಮಾರಿ ಸರೋಜಿನಿ, ಸಂಚಾಲಕರು ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಾವಳಕಟ್ಟೆ ಶಾಖೆ ,ಇವರು ಭಾಗವಹಿಸಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿ, ಮಾದಕ ವಸ್ತುಗಳು, ತಂಬಾಕು, ಮದ್ಯಪಾನ ಸೇರಿದಂತೆ ಯಾವುದೇ ರೀತಿಯ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನ ನಡೆಸುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ವ್ಯಸನದ ದುಷ್ಪರಿಣಾಮಗಳು, ವಿದ್ಯಾರ್ಥಿಗಳ ಮೇಲೆ ಅದರ ಪರಿಣಾಮ ಹಾಗೂ ಸಮಾಜವನ್ನು ನಶಾಮುಕ್ತಗೊಳಿಸುವಲ್ಲಿ ಯುವಜನರ ಪಾತ್ರದ ಕುರಿತು ಜಾಗೃತಿ ಮೂಡಿಸಲಾಯಿತು. ಪ್ರತಿಯೊಬ್ಬರೂ ತಮ್ಮ ಕುಟುಂಬ ಹಾಗೂ ಸ್ನೇಹಿತರಲ್ಲಿಯೂ ನಶಾಮುಕ್ತ ಜೀವನದ ಸಂದೇಶವನ್ನು ಹರಡುವಂತೆ ಪ್ರೇರೇಪಿಸಲಾಯಿತು.
ಸಹಶಿಕ್ಷಕರಾದ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ,ಸ್ವಾಗತಿಸಿ ವಂದಿಸಿದರು.











