ಬೆಳ್ತಂಗಡಿ : ನಾವೂರು ಗ್ರಾಮದ ಮುಹಿಯುದ್ದೀನ್ ಜುಮಾ ಮಸೀದಿ ಮುರ-ನಾವೂರು ಇದರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೀಲಾದ್ ಪ್ರಯುಕ್ತ ನೆಬಿದಿನ ರ್ಯಾಲಿ ನಾವೂರು ಜಂಕ್ಷನ್ ತಲುಪಿದಾಗ, ನವೋದಯ ಯುವಕ ಮಂಡಲ (ರಿ) ಇದರ ಅಧ್ಯಕ್ಷ ಸ್ವರೂಪ್, ಪ್ರ.ಕಾರ್ಯದರ್ಶಿ ಪ್ರದೀಪ್ ನಾಗಾಜೆ, ಮಾಜಿ ಅಧ್ಯಕ್ಷರಾದ ಹರೀಶ್ ಕಾರಿಂಜ, ಧರ್ನಪ್ಪ ಭಾರತ್ ಶಾಮಿಯಾನ, ಬಾಲಕೃಷ್ಣ (ಬಾಲು ) ನಾವೂರು, ನಾವೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಗೌಡ , ಟೈಲರ್ ಉಮೇಶ್, ವಸಂತ ಸೇರಿದಂತೆ ಹಲವು ಮುಖಂಡರು ಮೀಲಾದ್ ರ್ಯಾಲಿಯನ್ನು ಸ್ವಾಗತಿಸಿದರು. ಮಾತ್ರವಲ್ಲದೆ ರ್ಯಾಲಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿತಿಂಡಿ ವಿತರಿಸಿ ಸೌಹಾರ್ದತೆ, ಸಾಮರಸ್ಯದ ಸಂದೇಶವನ್ನು ಸಾರಿದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನವೋದಯ ಯುವಕ ಮಂಡಲದ ಅಧ್ಯಕ್ಷ ಸ್ವರೂಪ್ ಪ್ರವಾದಿ ಮುಹಮ್ಮದ್ ( ಸ.ಅ) ರ ಜನ್ಮದಿನಾಚರಣೆಗೆ ಶುಭಕೋರಿದರಲ್ಲದೆ, ನಾಡಿನಲ್ಲಿ ಸರ್ವ ಧರ್ಮದವರೂ ಐಕ್ಯತೆಯಿಂದ ಕೂಡಿ ಬಾಳುವುದೇ ಈದ್ ಮಿಲಾದ್ ನ ಸಂದೇಶ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಗೌಡ ಮಾತನಾಡಿ ಜಾತಿ ,ಧರ್ಮ ಬೇದವ ಮರೆತು ಸಾಮರಸ್ಯ ಸೌಹಾರ್ದತೆಯಿಂದ ಪ್ರವಾದಿಯವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸುವುದರ ಜೊತೆಗೆ ಸರ್ವ ಧರ್ಮದವರೂ ಜೊತೆಗೂಡಿ ಗ್ರಾಮದ, ಹಾಗೂ ನಾಡಿನ ಅಭಿವೃದ್ಧಿಗೆ ಪರಸ್ಪರ ಕೈಜೋಡಿಸಬೇಕೆಂದು ಕರೆ ನೀಡಿದರು. ಮುಹಿಯುದ್ದೀನ್ ಜುಮಾ ಮಸೀದಿ ಮುರ-ನಾವೂರು ಇದರ ಜೊತೆ ಕಾರ್ಯದರ್ಶಿ ಅಬ್ದುಲ್ ಖಾದರ್ ನಾವೂರು ಸ್ವಾಗತಿಸಿ ಪ್ರವಾದಿ ಸಂದೇಶ ಭಾಷಣ ಮಾಡಿದರು.
ಮುಹಿಯುದ್ದೀನ್ ಜುಮಾ ಮಸೀದಿ ಮುರ ಖತೀಬ್ ಬಹು ಬಶೀರ್ ಸಅದಿ ಕೆಮ್ಮಾರ ಶುಭ ಹಾರೈಸಿ ನವೋದಯ ಯುವಕ ಮಂಡಲ ಯುವಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು..
ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಮುರ-ನಾವೂರು ಇದರ ಅಧ್ಯಕ್ಷ ಇಬ್ರಾಹಿಂ ಸಿಎಂ, ಪ್ರ ಕಾರ್ಯದರ್ಶಿ ಜಲೀಲ್ ಪಡಂಬಿಲ, ಮಾಜಿ ಅಧ್ಯಕ್ಷ ಹಸೈನಾರ್ ಎನ್.ಕೆ ಉಪಸ್ಥಿತರಿದ್ದರು . ಕೋಶಾಧಿಕಾರಿ ಶಾಹುಲ್ ಹಮೀದ್ ಐಡಿಯಲ್ ಧನ್ಯವಾದ ಸಮರ್ಪಿಸಿದರು. ನೂರುಲ್ ಹುದಾ ಮದರಸ ಮಕ್ಕಳಿಂದ ಆಕರ್ಷಕ ಧಫ್ ಪ್ರದರ್ಶನ ನಡೆಯಿತು.
ನಾವೂರಿನಲ್ಲಿ ಈ ವರ್ಷ ಮೀಲಾದ್ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ, ಸೌಹಾರ್ದತೆ, ಸಾಮರಸ್ಯ ಸಾರುವ ಸಂಕೇತವಾಗಿ ಮೂಡಿ ಬಂದಿದ್ದು ಸರ್ವರನ್ನೂ ಹರ್ಷಭರಿತರನ್ನಾಗಿ ಮಾಡಿದೆ. ಇದೇ ರೀತಿ ಎಲ್ಲ ಊರಿನಲ್ಲೂ ಶಾಂತಿ, ಸೌಹಾರ್ದತೆ, ಸಹೋದರತೆ, ಸಹಬಾಳ್ವೆ ನಡೆಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ. ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿ. ನವೋದಯ ಯುವಕ ಮಂಡಲ ಇವರಿಗೆ ಮತ್ತೊಮ್ಮೆ ಅಭಿನಂದನೆಗಳು. –ಅಬ್ದುಲ್ ಖಾದರ್, ನಾವೂರು











