ಉಜಿರೆ: ಇಂದಿನ ಯುವಜನತೆ ಕೃಷಿ ಕ್ಷೇತ್ರದಿಂದ ವಿಮುಖರಾಗದೆ, ಕೃಷಿಯಲ್ಲಿ ತೊಡಗಿಸಿಕೊಂಡು ಆಧುನಿಕ ಹಾಗೂ ಸುಧಾರಿತ ಪದ್ಧತಿಗಳ ಮೂಲಕ ಉತ್ತಮ ಇಳುವರಿ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕ ಹಾಗೂ ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ ಕಲ್ಮಂಜ ತಿಳಿಸಿದರು.
ಅವರು ಜೆಸಿಐ ಉಜಿರೆ ಸಿಟಿ ಘಟಕದ ವತಿಯಿಂದ ನೀಡಲಾದ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. “ಸಾಕಷ್ಟು ಸವಾಲುಗಳ ನಡುವೆಯೂ ಕೃಷಿ ರಂಗದಲ್ಲಿ ಅಪಾರ ಅವಕಾಶಗಳಿವೆ. ಆಸಕ್ತಿಯೊಂದಿಗೆ ವೈಜ್ಞಾನಿಕ ಕೃಷಿ ಮಾಹಿತಿಯನ್ನು ಬಳಸಿಕೊಂಡರೆ ಕೃಷಿಯಿಂದಲೇ ಅತ್ಯುತ್ತಮ ಆರ್ಥಿಕ ಪ್ರಗತಿ ಕಾಣಲು ಸಾಧ್ಯ” ಎನ್ನುವ ಮಾತಿನ ಮೂಲಕ ಯುವ ಸಮುದಾಯಕ್ಕೆ ಸ್ಪೂರ್ತಿ ತುಂಬಿದರು. ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷ (ZVP) ಅರುಣ್ ಮಾಂಜ ರವರು ಘಟಕದ ಅತ್ಯುತ್ತಮ ಕಾರ್ಯಕ್ರಮಗಳ ಬಗ್ಗೆ ಸಾಧನೆಯನ್ನು ವ್ಯಕ್ತಪಡಿಸಿ ಮುಂದಿನ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಆಗಮಿಸಿದ ಅಭ್ಯಾಗತರನ್ನು ಸ್ವಾಗತಿಸಿ ಮಾತನಾಡಿದ ಜೆಸಿಐ ಉಜಿರೆ ಸಿಟಿ ಅಧ್ಯಕ್ಷ ಜೆಎಫ್ಎಮ್ ಮಹಮ್ಮದ್ ಮಿರ್ಶಾದ್ ಅವರು, ವ್ಯಕ್ತಿತ್ವ ವಿಕಸನ ಮತ್ತು ತರಬೇತಿಗೆ ವಿಶೇಷ ಆದ್ಯತೆಯನ್ನು ನೀಡುವುದರೊಂದಿಗೆ ಸಮಾಜದಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಜೆಸಿಐ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.
ಜೆಸಿ ಸದಸ್ಯರಾದ ವಿದ್ಯಾಶ್ರೀ ಸನ್ಮಾನ ಪತ್ರ ವಾಚಿಸಿದರು . ಲೇಡೀ ಜೇಸಿ ಸಂಯೋಜಕಿ ಹೇಮಾವತಿ ಕೆ. ಉಪಸ್ಥಿತರಿದ್ದರು. ಜನಾರ್ದನ್ ಕೆ. ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸುಮಿತ್ರ ರವರ ಜೆಸಿ ವಾಣಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿ ರಾಜ್ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಜೆಸಿಐ ಉಜಿರೆ ಸಿಟಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.











