September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ನಾವೂರು ಹಾಗೂ ಕುತ್ಲೂರು ಗ್ರಾಮಗಳ ದುರ್ಗಮ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಬಹುಕಾಲದ ಬೇಡಿಕೆಗೆ ಮಹತ್ವದ ಸ್ಪಂದನೆ ದೊರೆತಿದ್ದು, 11 ಕೆ.ವಿ. ವಿದ್ಯುತ್ ವಿತರಣಾ ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅಗತ್ಯ ವನ್ಯಜೀವಿ ಅನುಮತಿ ದೊರೆತಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ನಾವೂರು ಗ್ರಾಮದ ಪುಳಿತ್ತಡಿ, ಎರ್ಮಲೆ ಹಾಗೂ ಕಾಸ್ರೋಳಿ ಎಸ್‌ಟಿ ಕಾಲೋನಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 0.3189 ಹೆಕ್ಟೇರ್ ಪ್ರದೇಶದಲ್ಲಿ 11 ಕೆ.ವಿ. ವಿದ್ಯುತ್ ವಿತರಣಾ ಮಾರ್ಗ ಅಳವಡಿಸಲು ಅನುಮತಿ ನೀಡಲಾಗಿದೆ.

ಅದೇ ರೀತಿ, ಕುತ್ಲೂರು ಗ್ರಾಮದ ಬರೆಂಗಡಿ, ಅಂಜರೊಟ್ಟು, ಎರ್ಡಾಡಿ, ನಂಗಾಜೆ, ಪಂಜಾಳ, ಕೊಟ್ಟೆಂದಡ್ಕ, ಅಳಂಬ ಹಾಗೂ ಬಾರ್ಥಾಜೆ ಪ್ರದೇಶಗಳ ಮನೆಗಳಿಗೆ ವಿದ್ಯುದೀಕರಣ ಕಲ್ಪಿಸುವ ಉದ್ದೇಶದಿಂದ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸುವ ಯೋಜನೆಗೂ ಅನುಮೋದನೆ ದೊರೆತಿದೆ. ಈ ಯೋಜನೆಗಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 0.8356 ಹೆಕ್ಟೇರ್ ಪ್ರದೇಶ ಬಳಕೆಗೆ ಅನುಮತಿ ನೀಡಲಾಗಿದೆ.

ಎರಡೂ ಯೋಜನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 91ನೇ ಸಭೆಯಲ್ಲಿ ಪರಿಗಣಿಸಿ ಶಿಫಾರಸು ಮಾಡಲಾಗಿತ್ತು. ಅದರಂತೆ ಅಗತ್ಯ ವನ್ಯಜೀವಿ ಅನುಮತಿ ದೊರೆತಿದ್ದು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.

ಯೋಜನೆಯಡಿ ವಿದ್ಯುತ್ ಮಾರ್ಗವನ್ನು ಸಂಪೂರ್ಣವಾಗಿ ಭೂಗತ ಕೇಬಲ್ ಮೂಲಕವೇ ಅಳವಡಿಸಬೇಕಿದ್ದು, ಅರಣ್ಯ ಇಲಾಖೆಯ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಕಾಮಗಾರಿ ಕೈಗೊಳ್ಳಬೇಕಾಗಿದೆ. ಪರಿಸರ ಹಾಗೂ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಯನ್ನು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯೊಳಗೆ ಮಾತ್ರ ಕೈಗೊಳ್ಳುವಂತೆಯೂ ಷರತ್ತು ವಿಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಹರೀಶ್ ಪೂಂಜ ಅವರು, ದುರ್ಗಮ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗಳಿಗೆ ಅನುಮತಿ ದೊರಕಿಸಲು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

“ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಗ್ರಾಮ, ಯಾವುದೇ ಮನೆ ಹಾಗೂ ಯಾವುದೇ ಕುಟುಂಬ ಹಿಂದುಳಿಯಬಾರದು ಎಂಬುದು ನಮ್ಮ ಬದ್ಧತೆಯಾಗಿದೆ. ದುರ್ಗಮ ಪ್ರದೇಶದ ಜನರಿಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಮುಂದೆಯೂ ನಿರಂತರವಾಗಿ ಕೆಲಸ ಮಾಡಲಾಗುವುದು,” ಎಂದು ಅವರು ಹೇಳಿದ್ದಾರೆ.

ಅಗತ್ಯ ಇಲಾಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೆಸ್ಕಾಂ ವತಿಯಿಂದ ಎರಡೂ ಯೋಜನೆಗಳ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಯೋಜನೆಗಳಿಗೆ ಅನುಮತಿ ದೊರಕಿಸುವಲ್ಲಿ ಸಹಕರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು, ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಮೆಸ್ಕಾಂ ಹಾಗೂ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ

Suddi Udaya

ಎಸ್‌ಡಿಎಂ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಟಿ. ಪ್ರಕಾಶ ಪ್ರಭು ರವರಿಗೆ ಡಾಕ್ಟರೇಟ್ ಪದವಿ

Suddi Udaya

ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನಕ್ಕೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಮುಂಡತ್ತೊಡಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

-75 ವರ್ಷದ ಇತಿಹಾಸ ಇರುವ ಕೊಯ್ಯೂರು ಪುರುಷರ ರಾಶಿಪೂಜೆ -7 ಮಂದಿ ಹಿರಿಯ ಪುರುಷರ ಕಲಾವಿದರಿಗೆ ಸನ್ಮಾನ, -ವಿಷ್ಣುಮೂರ್ತಿ ದೇವಸ್ಥಾನಕ್ಕೆ 5 ಕಬ್ಬಿಣದ ಟೇಬಲ್ ಹಾಗೂ 50 ಪ್ಲಾಸ್ಟಿಕ್ ಕುರ್ಚಿ ಗಳ ಕೊಡುಗೆ

Suddi Udaya

ಮುಂಡಾಜೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya
error: Content is protected !!