ಬೆಳ್ತಂಗಡಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗುರುವಾಯನಕೆರೆಯ ಎಕ್ಸೆಲ್ ಟೆಕ್ನೋ ಸ್ಕೂಲ್ನಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ‘ಗೋಕುಲದ ಗೋಪಾಲ’ ಸ್ಪರ್ಧೆಯಲ್ಲಿ ಬಳಂಜದ ಸ್ಮಯ ಎಸ್. ಕೋಟ್ಯಾನ್ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ತಾಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಶ್ರೀಕೃಷ್ಣನ ಬಾಲಲೀಲೆ ಹಾಗೂ ಗೋಪಾಲನ ವೇಷಭೂಷಣದ ಮೂಲಕ ಗಮನ ಸೆಳೆದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಸಂಸ್ಥೆಯ ಉದ್ದೇಶ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದರು.

ಪ್ರಥಮ ಸ್ಥಾನ ಪಡೆದ ಸ್ಮಯ ಎಸ್. ಕೋಟ್ಯಾನ್ ಎಕ್ಸೆಲ್ ಟೆಕ್ನೋ ಸ್ಕೂಲ್ನ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಪತ್ರಕರ್ತ ಸಂತೋಷ್ ಪಿ. ಕೋಟ್ಯಾನ್ ಬಳಂಜ ಮತ್ತು ಅಮೃತ ಎಸ್. ಕೋಟ್ಯಾನ್ ದಂಪತಿಯ ಪುತ್ರಿ.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ಈ ಸ್ಪರ್ಧೆ ಮಕ್ಕಳಲ್ಲಿ ಸಂಭ್ರಮ ಮೂಡಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿ ಹಾಗೂ ಪೌರಾಣಿಕ ಪರಂಪರೆಯ ಪರಿಚಯಕ್ಕೂ ಉತ್ತಮ ವೇದಿಕೆಯಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ, ಪ್ರಜ್ವಲ್ ಕಹೆ, ಸುಮಿತ್ರಾ ಗೌಡ ಹಾಗೂ ಶಿಕ್ಷಕರು,ಉಪನ್ಯಾಸಕರು ಉಪಸ್ಥಿತರಿದ್ದರು.












