ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿಇಒ ಅಮ್ಮಾಜಿ ಕೋಟ್ಯಾನ್ ಹಾಗೂ ನಿವೃತ್ತ ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಪ್ರಭಾಕರ್ ಅವರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸಂಘದ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಸ್ಪಷ್ಟಪಡಿಸಿದ್ದಾರೆ.
ಸುದ್ದಿ ಉದಯ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪಿಎಫ್ ಹಾಗೂ ರಜೆ ಸಂಬಳ ನೀಡದಿರುವುದಕ್ಕೆ ಸಂಘದ ವತಿಯಿಂದ ಯಾವುದೇ ಉದ್ದೇಶಪೂರ್ವಕ ವಿಳಂಬ ಮಾಡಲಾಗಿಲ್ಲ. ನೂತನ ಸಿಇಒ ಅವರಿಗೆ ನಿವೃತ್ತ ಸಿಇಒ ಅಮ್ಮಾಜಿ ಕೋಟ್ಯಾನ್ ಅವರು ಅಗತ್ಯ ದಾಖಲೆಗಳು ಹಾಗೂ ಅಧಿಕಾರವನ್ನು ಸಮರ್ಪಕವಾಗಿ ಹಸ್ತಾಂತರ ಮಾಡದಿರುವುದರಿಂದ ಕೆಲವು ಪ್ರಕ್ರಿಯೆಗಳಲ್ಲಿ ವಿಳಂಬವಾಗಿದೆ ಎಂದು ತಿಳಿಸಿದರು.
ಗ್ರಾಚ್ಯೂಟಿ ಮೊತ್ತವನ್ನು ಸಂಘದ ವತಿಯಿಂದ ನೇರವಾಗಿ ಪಾವತಿಸುವ ವ್ಯವಸ್ಥೆ ಇರುವುದಿಲ್ಲ. ಎಲ್ಐಸಿ ಕಚೇರಿಯಿಂದ ಗ್ರಾಚ್ಯೂಟಿ ಮೊತ್ತ ಬಂದ ಬಳಿಕ ಅದನ್ನು ಸಂಬಂಧಪಟ್ಟವರಿಗೆ ನೀಡಲಾಗುತ್ತದೆ. ಆದರೆ ಈ ಪ್ರಕ್ರಿಯೆಗೆ ಅಗತ್ಯವಿರುವ ಪೂರಕ ದಾಖಲೆಗಳನ್ನು ಅಮ್ಮಾಜಿ ಕೋಟ್ಯಾನ್ ಅವರು ಸಲ್ಲಿಸಿಲ್ಲ ಎಂದು ಅಧ್ಯಕ್ಷರು ಆರೋಪಿಸಿದರು.
ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಎನ್. ಪ್ರಭಾಕರ್ ಅವರು ಫೆಬ್ರವರಿ ತಿಂಗಳಲ್ಲಿ ನಿವೃತ್ತರಾಗಿದ್ದಾರೆ. ಆ ಸಂದರ್ಭದಲ್ಲಿ ಅಮ್ಮಾಜಿ ಕೋಟ್ಯಾನ್ ಅವರು ಸಂಘದ ಸಿಇಒ ಆಗಿದ್ದರು. ನಿವೃತ್ತಿಯ ಸಂದರ್ಭದಲ್ಲಿ ಪ್ರಭಾಕರ್ ಅವರಿಗೆ ದೊರೆಯಬೇಕಾದ ಸೌಲಭ್ಯಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಿಇಒ ಆಗಿದ್ದ ಅಮ್ಮಾಜಿ ಕೋಟ್ಯಾನ್ ಅವರು ಸಿದ್ಧಪಡಿಸಬೇಕಾಗಿತ್ತು. ಅದು ಅವರ ಜವಾಬ್ದಾರಿಯಾಗಿತ್ತು ಎಂದು ಸುಧೀರ್ ಆರ್. ಸುವರ್ಣ ಹೇಳಿದರು.
ಯಾರಿಗೆ ಯಾವ ಸೌಲಭ್ಯ, ಭತ್ಯೆ ಹಾಗೂ ನಿವೃತ್ತಿ ಸೌಲಭ್ಯಗಳು ಕಾನೂನುಬದ್ಧವಾಗಿ ದೊರೆಯಬೇಕೋ ಅವುಗಳನ್ನು ನೀಡಲು ಸಂಘ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹಾಗೂ ನಿಯಮಾನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಅಮ್ಮಾಜಿ ಕೋಟ್ಯಾನ್ ಹಾಗೂ ಎನ್. ಪ್ರಭಾಕರ್ ಅವರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಮಾಡಲಾಗುತ್ತಿರುವ ಆರೋಪಗಳು ವಾಸ್ತವಾಂಶಕ್ಕೆ ವಿರುದ್ಧವಾಗಿವೆ ಎಂದು ಅವರು ಸ್ಪಷ್ಟಪಡಿಸಿದರು.












