ಉಜಿರೆ: ಸಾಮಾನ್ಯವಾಗಿ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಅಂತ ಹೊರಟಾಗ ಸವಾಲುಗಳು ಎದುರಾಗುವುದು ಸಹಜ. ಆದರೆ ನಮ್ಮ ಗುರಿಯನ್ನು ಬೆನ್ನತ್ತಿ ಹೊರಟು ಕಂಕಣ ತೊಟ್ಟು ನಿಂತಾಗ ಎದುರಿಗಿರುವ ಎಲ್ಲಾ ವಿಘ್ನಗಳು ತಾನಾಗಿಯೇ ನಮ್ಮಿಂದ ದೂರವಾಗುತ್ತವೆ. ಹಾಗಾಗಿ ಕಷ್ಟ-ನಷ್ಟಗಳ ಎದುರು ಧೃತಿಗೆಡದೆ, ನಮ್ಮ ಕೆಲಸಗಳಲ್ಲಿ ನಂಬಿಕೆ ಮತ್ತು ಶ್ರದ್ಧೆ ಇಡಬೇಕು ಎಂದು ಕೆಜಿಎಫ್, ಟಾಕ್ಸಿಕ್ ಮತ್ತು ಸಲಾರ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ “ಎಸ್ಡಿಎಂ ಆರೋಹಂ 2026″ರ ಭಾಗವಾಗಿ ಸೆ.10ರಂದು ಸಂಜೆ ಹಮ್ಮಿಕೊಂಡಿದ್ದ ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಸಿನಿಮಾ ಮತ್ತು ಸಂಗೀತದ ಸ್ವರೂಪದ ಬಗ್ಗೆ ಮಾತನಾಡುತ್ತಾ, ಬದಲಾವಣೆ ಜಗದ ನಿಯಮ, ಕಾಲ ಬದಲಾದಂತೆ ನಾವು ಕೂಡ ಬದಲಾವಣೆಗೆ ಒಗಿಕೊಳ್ಳಬೇಕು. ಜನ ನಮ್ಮಿಂದ ಏನು ಬಯಸುತ್ತಾರೆ ಅನ್ನೋದನ್ನು ಅರಿತು ನಾವು ಅದನ್ನು ಅವರಿಗೆ ಕೊಟ್ಟಾಗ ಮಾತ್ರ ನಮ್ಮ ವೃತ್ತಿ ಬದುಕು ಸಾರ್ಥಕ ಮತ್ತು ಸಾಧಕ. ಎಲ್ಲರೂ ಸಮಯದ ಮಹತ್ವವನ್ನು ಅರಿತು ಕಾಲಹರಣ ಮಾಡದೇ ಇರುವ ಸಮಯವನ್ನು ತಮ್ಮ ಕನಸುಗಳನ್ನು ಸಕಾರಗೊಳಿಸಿಕೊಳ್ಳಲು ವ್ಯಯ ಮಾಡಬೇಕು ಎಂದು ಕಿವಿಮಾತು ಹೇಳಿದರು.

ತಮ್ಮ ಸಂಗೀತ ನಿರ್ದೇಶನದ ಮೆಲುಕು ಹಾಕುತ್ತಾ ಮಾತನಾಡಿದ ಅವರು, ಅನೇಕ ಸೋಲುಗಳ ನಡುವೆ ಗೆಲುವನ್ನ ಅರಸಿ ಹೊರಟಾಗ ನಟ ಪುನೀತ್ ರಾಜಕುಮಾರ್, ಪ್ರಭಾಸ್, ಯಶ್, ಶ್ರೀ ಮುರುಳಿ ಮತ್ತು ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ ಸೇರಿದಂತೆ ಹಲವರು ಅವಕಾಶ ನೀಡಿದರು ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮದ ಭಾಗವಾಗಿ ಆಯೋಜಿಸಿದ್ದ ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಕಂಬೋಜಿ ತಂಡದ ವತಿಯಿಂದ ಸಂಗೀತ ಸಂಜೆ ನಡೆಯಿತು. ತಂಡದ ಕಲಾವಿದರು ಜನಪ್ರಿಯ ಕನ್ನಡ, ಹಿಂದಿ ಮತ್ತು ಮಲಯಾಳಂ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರೆಗು ನೀಡಿ ವಿದ್ಯಾರ್ಥಿಗಳಿಗೆ ಭರ್ಜರಿ ಮನರಂಜನೆ ನೀಡಿದರು. ವಿದ್ಯಾರ್ಥಿಗಳೆಲ್ಲಾ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ಕಾರ್ಯಕ್ರಮದಲ್ಲಿ ಉತ್ಸಾಹಭರಿತರಾಗಿ ಭಾಗವಹಿಸಿದರು.
ಇನ್ನೂ, ಕಾರ್ಯಕ್ರಮದಲ್ಲಿ ರವಿ ಬಸ್ರೂರು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ, ಉಪ ಪ್ರಾಂಶುಪಾಲೆ ನಂದಕುಮಾರಿ ಕೆ ಪಿ, ಡೀನ್ಗಳು, ವಿವಿಧ ವಿಭಾಗಗಳ ವಿಭಾಗ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂದೀಪ್ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಮೂವಿ ಅಭೇದ್ಯಮಂ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಪ್ರಾಂಶುಪಾಲ ಪ್ರೊ. ವಿಶ್ವನಾಥ. ಪಿ ಪೋಸ್ಟರ್ ಅನಾವರಣಗೊಳಿಸಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉಪನ್ಯಾಸಕ ಡಾ. ಮಹೇಶ್ ಶೆಟ್ಟಿ ನಿರೂಪಿಸಿದರು.












