ಬೆಳ್ತಂಗಡಿ: ಹೋಲಿ ರೆಡೀಮರ್ ಚರ್ಚ್, ಚರ್ಚ್ ಪಾಲನಾ ಪರಿಷತ್ ಹಾಗೂ 5 ಆಯೋಗಗಳ ಆಯೋಜನೆಯೊಂದಿಗೆ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ),ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ಸಹಭಾಗಿತ್ವದಲ್ಲಿ,ಮಳೆಯ ನೀರನ್ನು ವೈಜ್ಞಾನಿಕವಾಗಿ ಫಿಲ್ಟರೀಕರಣ ಮಾಡಿಕೊಂಡು ಬೋರ್ವೆಲ್ ಗೆ ನೀರು ಇಂಗುಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನೀರು ಇಂಗಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ವಂ ಫಾ .ವಾಲ್ಟರ್ ಡಿಮೆಲ್ಲೊ ಮಾತನಾಡುತ್ತಾ, ದೇವರು ಈ ಸುಂದರ ಭೂಮಿಯನ್ನು ನಮಗೆ ಕೊಟ್ಟಿದ್ದಾರೆ. ಹಸಿರು ಮರಗಳು, ಪರ್ವತಗಳು, ನದಿಗಳು, ಮಳೆ, ಗಾಳಿ – ಇವೆಲ್ಲವೂ ದೇವರ ಅಮೂಲ್ಯ ಉಡುಗೊರೆಗಳು. ಆದರೆ ನಾವು ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಯಾವ ರೀತಿಯ ಭೂಮಿಯನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಪ್ರಶ್ನೆಯನ್ನು ನಾವು ಇಂದು ನಮ್ಮ ಮನಸ್ಸಿಗೆ ಕೇಳಿಕೊಳ್ಳಬೇಕು. ಇಂದು ಅನೇಕ ಕಡೆಗಳಲ್ಲಿ ಬಾವಿಗಳು ಒಣಗುತ್ತಿವೆ. ರೈತರು ಮಳೆಯ ನಿರೀಕ್ಷೆಯಲ್ಲಿ ಕಣ್ಣೀರಿಡುತ್ತಿದ್ದಾರೆ. ಕೆಲವು ಕುಟುಂಬಗಳು ಒಂದು ಬಕೆಟ್ ನೀರಿಗಾಗಿ ಮೈಲುಗಟ್ಟಲೆ ನಡೆಯುವ ಪರಿಸ್ಥಿತಿ ಎದುರಿಸುತ್ತಿವೆ. ನೀರಿನ ಬೆಲೆ ನಮಗೆ ಅದರ ಕೊರತೆ ಬಂದಾಗ ಮಾತ್ರ ಅರ್ಥವಾಗುತ್ತದೆ.
ನಾವು ದೇವರಲ್ಲಿ ಮಳೆಗಾಗಿ ಪ್ರಾರ್ಥಿಸುತ್ತೇವೆ. ಆದರೆ ದೇವರು ದಯಪಾಲಿಸಿ ಕೊಟ್ಟ ಮಳೆನೀರನ್ನು ನಾವು ವ್ಯರ್ಥವಾಗಿ ಹರಿಯಲು ಬಿಟ್ಟರೆ, ಅದು ನಮ್ಮ ಕರ್ತವ್ಯವನ್ನು ಮರೆತಂತಾಗುವುದಿಲ್ಲವೇ?.
ನೀರು ಇಂಗಿಸುವಿಕೆಯ ಕಾರ್ಯ ಇದು ಕೇವಲ ಒಂದು ತಾಂತ್ರಿಕ ಯೋಜನೆ ಅಲ್ಲ; ಇದು ಮುಂದಿನ ಪೀಳಿಗೆಗಾಗಿ ಮಾಡಿರುವ ಪ್ರೀತಿಯ ಕಾರ್ಯ. ಚರ್ಚ್ ಕೇವಲ ಪ್ರಾರ್ಥನೆಯ ಸ್ಥಳವಲ್ಲ; ಸಮಾಜಕ್ಕೆ ಬೆಳಕು ತೋರಿಸುವ ಸ್ಥಳ. ಇಂದು ಹೋಲಿ ರಿಡೀಮರ್ ಚರ್ಚ್ ತೆಗೆದುಕೊಂಡ ಈ ಹೆಜ್ಜೆ, ಪ್ರತಿಯೊಬ್ಬರಿಗೂ ಒಂದು ಸಂದೇಶ ನೀಡುತ್ತದೆ ಪ್ರಾರ್ಥನೆ ಜೊತೆಗೆ ಕಾರ್ಯವೂ ಇರಬೇಕು.
ಇಂದು ಇಲ್ಲಿರುವ ಪ್ರತಿಯೊಬ್ಬರೂ ಒಂದು ಚಿಕ್ಕ ಸಂಕಲ್ಪ ಮಾಡೋಣ: ಒಂದು ಹನಿ ನೀರನ್ನು ಕೂಡ ವ್ಯರ್ಥ ಮಾಡಬೇಡ. ಒಂದು ಮರ ನೆಡು. ಮಳೆನೀರನ್ನು ಉಳಿಸು. ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಕೊಡು. ಒಂದು ಮಾತು ನೆನಪಿರಲಿ: “ನಾವು ಭೂಮಿಯನ್ನು ನಮ್ಮ ಪೂರ್ವಜರಿಂದ ಪಡೆದಿಲ್ಲ; ನಮ್ಮ ಮಕ್ಕಳಿಂದ ಸಾಲವಾಗಿ ಪಡೆದಿದ್ದೇವೆ.” ಆದ್ದರಿಂದ ಬನ್ನಿ, ನೀರನ್ನು ಉಳಿಸೋಣ – ಪ್ರಕೃತಿಯನ್ನು ಕಾಪಾಡೋಣ – ದೇವರ ಸೃಷ್ಟಿಯನ್ನು ಸಂರಕ್ಷಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್,(ರಿ) ಬೆಳ್ತಂಗಡಿ ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾತನಾಡುತ್ತಾ ಒಂದು ವರ್ಷದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಚರ್ಚಿನ ಸಂಪೂರ್ಣವಾದ ಸಹಕಾರದೊಂದಿಗೆ ಮಳೆ ಕೊಯ್ಲು ಪ್ರತ್ಯೇಕ್ಷಿಕೆ ಕಾರ್ಯಕ್ರಮವನ್ನು ಚರ್ಚ್ ನಲ್ಲಿ ಮಾಡಿದ್ದು,ಆದರೆ ಒಂದು ವರ್ಷದ ನಿರಂತರ ಪ್ರಯತ್ನದೊಂದಿಗೆ ಚರ್ಚಿನ ಧರ್ಮಗುರುಗಳ ಸಂಪೂರ್ಣ ಸಹಕಾರ ಆಶೀರ್ವಾದದೊಂದಿಗೆ ತಾಲೂಕಿನಲ್ಲಿಯೇ ಮಾದರಿಯಾಗಿ ನಿರಿಂಗಿಸುವ ಕಾರ್ಯಕ್ರಮವನ್ನು ಚರ್ಚಿನಲ್ಲಿ ಮಾಡಿದ್ದು, ಈ ಭಾಗದ ಎಲ್ಲರಿಗೂ ಕೂಡ ಇದರ ಪ್ರಯೋಜನ ಸಿಕ್ಕಂತಾಗಿದೆ, ಇಂದಿನ ದಿನಮಾನದಲ್ಲಿ ಅತಿ ಹೆಚ್ಚು ಕೊಳವೆಬಾವಿಗಳನ್ನು ಕೊರೆಯುವ ಕಾರಣವಾಗಿ ಅಂತರ್ಜಲ ಕಡಿಮೆಯಾಗಿದ್ದು,ಇಂದಿನ ದಿನಮಾನದಲ್ಲಿ ಮಳೆಯು ಕೂಡ ಕಡಿಮೆ ಬರುತ್ತಿದ್ದು, ಭೂಮಿಗೆ ಬಿದ್ದ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಾವಿಗೆ ಅಥವಾ ಕೊಳವೆ ಬಾವಿಗೆ ಇಂಗಿಸಿದರೆ ಅಂತರ್ಜಲವನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಂ ಬಿ. ರವರು ನೀರು ಇಂಗಿಸುವ ಈ ಕಾರ್ಯಕ್ರಮ ಚರ್ಚೆಗೆ ಮಾತ್ರವಲ್ಲದೆ ಈ ಪ್ರದೇಶದ ಎಲ್ಲರಿಗೂ ಕೂಡ ಇದರ ಪ್ರಯೋಜನ ಸಿಗುತ್ತದೆ. ಇಂತಹ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು,
ಸುದ್ದಿ ಅರಿವು ಕೇಂದ್ರ ಪುತ್ತೂರಿನ ಹೊನ್ನಪ್ಪ ನೆಕ್ಕಿಲ್ಲರವರು, ರಾಜ್ಯಾದ್ಯಂತ ಸುದ್ದಿ ಅರಿವು ಕೇಂದ್ರವು,ನೀರಂಗಿಸುವ ಬಗ್ಗೆ ಅರಿವನ್ನು ಮೂಡಿಸಲು ಜನರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
ಗಿಲ್ಬರ್ಟ್ ಪಿಂಟೊ ಚರ್ಚ್ ಕಾರ್ಯದರ್ಶಿ ಲಾರೆನ್ಸ್ ಡೆಸಾ, ಕೃಷಿ ಸಂಚಾಲಾಕರು ಫೆಲಿಕ್ಸ್ ಕೊರೆಯಾ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಯ ಜನರಲ್ ಮ್ಯಾನೇಜರ್ ವಿನ್ಸೆಂಟ್ ಲೋಬೊ , ಆಯೋಗಗಳ ಸಂಚಾಲಕರು ಹಾಗೂ ವಾಳೆಯ ಗುರಿಕಾರರು, ಹಾಗೂ ರೈತರು ಹಾಜಾರಿದ್ದರು.
ತೋಮಸ್ ಪಿಂಟೋ ನಿರೂಪಿಸಿ, ಸುನಿತಾ ಸ್ವಾಗತಿಸಿ, ಲವೀನಾ ಬೆನ್ನಿಸ್ ಧನ್ಯವಾದಗೈದರು.













