ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಮಣಿಪಾಲ್ ಡಿಜಿಟಲ್ ನೆಟ್ವರ್ಕ್ ಲಿಮಿಟೆಡ್ನೊಂದಿಗೆ ಯೋಜಿಸಿದ ಶೈಕ್ಷಣಿಕ-ಔದ್ಯಮಿಕ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ, ವಿಭಾಗದ ಮುಖ್ಯಸ್ಥರಾದ ಡಾ. ಹಂಪೇಶ್ ಕೆ.ಎಸ್, ಮಣಿಪಾಲ್ ಡಿಜಿಟಲ್ ನೆಟ್ವರ್ಕ್ ಲಿಮಿಟೆಡ್ನ ಮಾನವ ಸಂಪನ್ಮೂಲ ಅಧಿಕಾರಿ ಉಷಾರಾಣಿ ಈ ಸಂದರ್ಭದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.
ಕಳೆದ ಏಳು ವರ್ಷಗಳಿಂದ ವಿಭಾಗ ಮತ್ತು ಮಣಿಪಾಲ್ ಡಿಜಿಟಲ್ ನೆಟ್ವರ್ಕ್ ಲಿಮಿಟೆಡ್ ಸಹಯೋಗದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದ, ಕ್ಯಾಂಪಸ್ ನೇಮಕಾತಿಗಾಗಿ ಪೂರ್ವಭಾವಿ ಲಿಖಿತ-ಮೌಖಿಕ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಈ ಒಡಂಬಡಿಕೆಯ ಮೂಲಕ ಸಂವಾದ ಮತ್ತು ನೇಮಕಾತಿಯ ಜೊತೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದಶವೂ ಸೇರ್ಪಡೆಗೊಂಡಿದೆ.
ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಪತ್ರಿಕಾ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆ ಎರಡಕ್ಕೂ ಬೇಕಾದ ಕಾರ್ಯಸಾಮರ್ಥ್ಯ ರೂಢಿಸಿ ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿಸುವ ನಿಟ್ಟಿನಲ್ಲಿ ಈ ಒಡಂಬಡಿಕೆ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು. ಕಳೆದ ಏಳು ವರ್ಷಗಳಿಂದಲೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆಯ ಮೂಲಕ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲೂ ವಿಭಾಗದ ವಿದ್ಯಾರ್ಥಿಗಳಿಗೆ ನೇಮಕಾತಿಯ ಸಂದರ್ಭದಲ್ಲಿ ಆದ್ಯತೆ ಮುಂದುವರೆಯಲಿದೆ ಎಂದು ಉಷಾರಣಿ ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ನಂದಕುಮಾರಿ ಕೆ.ಪಿ, ಐಕ್ಯೂಎಸಿ ಸಂಯೋಜಕರಾದ ಜಿ.ಆರ್.ಭಟ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ವಿಭಾಗದ ನಿಟಕಪೂರ್ವ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ, ಕಾಲೇಜಿನ ಪತ್ರಿಕೋದ್ಯಮ ಪದವಿ ವಿಭಾಗದ ಮುಖ್ಯಸ್ಥ ಸುನಿಲ್ ಹೆಗ್ಡೆ, ಮಣಿಪಾಲ್ ಡಿಜಿಟಲ್ ಮಾಧ್ಯಮದ ಮುಖ್ಯಸ್ಥ ನಾಗೇಂದ್ರ ತ್ರಾಸಿ, ವೀಡಿಯೋ ಕಂಟೆಂಟ್ ಮುಖ್ಯಸ್ಥ ರವಿಕಿರಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











