ಉಜಿರೆ:ಇಲ್ಲಿನ ರಾಮಕೃಷ್ಣ ಸಭಾಭವನದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಜಾತ್ರೆ ಪ್ರಯುಕ್ತ ಪೇಟೆ ಸವಾರಿ,ಯಕ್ಷಗಾನ ಹಾಗೂ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶದ ಆಮಂತ್ರಣ, ಹೊರೆ ಕಾಣಿಕೆ ಇತ್ಯಾದಿ ವ್ಯವಸ್ಥೆಗಳ ಕುರಿತು ಪೂರ್ವಭಾವಿ ಸಭೆ ಜರುಗಿತು.
ಶ್ರೀ ಜನಾರ್ದನ ದೇವಸ್ಥಾನದ ಶರತಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು.
ಜಾತ್ರೆಯ ಪೇಟೆ ಸವಾರಿ ಜ. 19ರಂದು ರಾತ್ರಿ 8:30ರ ಬಳಿಕ ಜರಗಲಿದ್ದು,ಆರ್ಥಿಕ ಸಮಿತಿ ಆಹಾರ ಹಾಗೂ ಅಲಂಕಾರ ಸಮಿತಿ ಸದಸ್ಯರು ಹಾಗೂ ಉಜಿರೆಯ ವರ್ತಕರ ಜತೆ ಚರ್ಚಿಸಲಾಯಿತು. ಸ್ವಚ್ಛತೆಗೆ ಆದ್ಯತೆ ನೀಡಿ ಅದ್ದೂರಿಯಾಗಿ ಪೇಟೆ ಸವಾರಿ ನಡೆಸುವ ಕುರಿತು ನಿರ್ಣಯಿಸಲಾಯಿತು.
ಜ.28ರಂದು ಜರಗಲಿರುವ ಯಕ್ಷಗಾನ ಕಾರ್ಯಕ್ರಮಕ್ಕೆ ಸಂಪನ್ಮೂಲ ಕ್ರೋಢೀಕರಣದ ಕುರಿತು ಸದಸ್ಯರಿಗೆ ವಿವರಗಳನ್ನು ಒದಗಿಸಲಾಯಿತು.
ಜ.31 ರಿಂದ ಫೆ.6ರ ತನಕ ಜರಗಲಿರುವ ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಬಗ್ಗೆ ಉಜಿರೆ ಗ್ರಾಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಆಮಂತ್ರಣ ಹಂಚುವ ಕುರಿತು,ಫೆ.3ರಂದು ಉಜಿರೆ ಗ್ರಾಮಸ್ಥರಿಂದ ಹೊರೆಕಾಣಿಕೆ ನೀಡುವ ಕುರಿತು ನಿರ್ಣಯಿಸಲಾಯಿತು.
ಪೇಟೆ ಸವಾರಿ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಯಕ್ಷಗಾನ ಸಮಿತಿಯ ಅಧ್ಯಕ್ಷ ಅರವಿಂದ ಕಾರಂತ, ಕಾರ್ಯದರ್ಶಿ ಗೋಪಾಲಕೃಷ್ಣ, ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಪಜಿರಡ್ಕ ದೇವಸ್ಥಾನದ ದೇವಸ್ಥಾನದ ಸಮಿತಿಗಳ ಮುಖ್ಯಸ್ಥರಾದ ತುಕಾರಾಮ ಸಾಲಿಯನ್, ಕೃಷ್ಣಪ್ಪ ಗುಡಿಗಾರ, ಶಶಿಕಿರಣ ಜೈನ್,ಗೋಪಾಲಕೃಷ್ಣ ಗುಲ್ಲೋಡಿ, ಮಂಜುನಾಥ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಪೇಟೆ ಸವಾರಿ ಸಮಿತಿಯ ಕಾರ್ಯದರ್ಶಿ ಶ್ರೀಧರ ಕೆ.ವಿ.ಕಾರ್ಯಕ್ರಮ ನಿರ್ವಹಿಸಿದರು.
















