ಉಜಿರೆ: ತೆಂಕುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದ ಶ್ರೀ ರಾಕೇಶ್ ರೈ ಅಡ್ಕರವರ ಯಕ್ಷಗಾನ ತರಬೇತಿ ಸಂಸ್ಥೆ ಸನಾತನ ಯಕ್ಷಾಲಯ ಮಂಗಳೂರು ( ರಿ.) ಇದರ ಹದಿನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಾಲಯದ ಆವರಣದಲ್ಲಿ ನಡೆದ ಯಕ್ಷಗಾನ ಪ್ರದರ್ಶನ “ಶ್ರೀಕೃಷ್ಣ ಲೀಲಾಮೃತಮ್” ನ ವೇದಿಕೆಯಲ್ಲಿ ಪ್ರಸಂಗ ಸಂಯೋಜಕರಾಗಿ ಸಹಕರಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್, ವೇಣೂರು ಇವರನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಗಣ್ಯರ ಸಮ್ಮುಖದಲ್ಲಿ ಜೂನ್ 24 ರಂದು ಸನ್ಮಾನಿಸಿದರು.
ಡಾ.ಸುಬ್ರಹ್ಮಣ್ಯ ಭಟ್ಟರು ಸಂಯೋಜಿಸಿದ ಈ ಪ್ರಸಂಗದಲ್ಲಿ ಒಟ್ಟು ಇನ್ನೂರ ಹದಿನೇಳು ವಿದ್ಯಾರ್ಥಿಗಳು ಪಾತ್ರವಹಿಸಿದ್ದು ಹದಿನೈದು ಗಂಟೆಗಳ ಕಾಲ ನಿರಂತರ ಪ್ರದರ್ಶನ ನೀಡಿ ಹೊಸ ದಾಖಲೆಯನ್ನು ಮಾಡಲಾಯಿತು. ಈ ಹಿಂದೆ ಇದೇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಪೂರ್ಣ ಕುರುಕ್ಷೇತ್ರ, ದಶಾವತಾರ ಹಾಗೂ ಏತದ್ಧಿ ರಾಮಾಯಣಂ ಎಂಬ ಯಕ್ಷಗಾನ ಪ್ರಸಂಗಗಳನ್ನು ಡಾ.ಸುಬ್ರಹ್ಮಣ್ಯ ಭಟ್ಟರು ಸಂಯೋಜಿಸಿ ಕೊಟ್ಟಿದ್ದರು.