ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ಎಕ್ಸೆಲ್ ಪ.ಪೂ. ಕಾಲೇಜು ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಬೆಳ್ತಂಗಡಿ ತಾಲೂಕು ಘಟಕ ಆಶ್ರಯದಲ್ಲಿ ಸೆ.9 ರಂದು ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನಲ್ಲಿ ಶೈಕ್ಷಣಿಕ ಸಮ್ಮೇಳನ ನಡೆಯಿತು.

ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಹೊಸತನಕ್ಕೆ ಒಗ್ಗಿಕೊಂಡರಷ್ಟೆ ಶಿಕ್ಷಣ ಮೌಲ್ಯ ಪರಿಪೂರ್ಣಗೊಳ್ಳಲು ಸಾಧ್ಯ. ಹೊಸ ಹೊಸ ಆವಿಷ್ಕಾರ, ವಿಚಾರಧಾರೆಗಳು ಇಂದಿನ ಶೈಕ್ಷಣಿಕ ಸವಾಲುಗಳಾಗಿವೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಅತ್ಯುತ್ತಮವಾದುದನ್ನು ನೀಡುವುದು ನಮ್ಮ ಉದ್ದೇಶವಾಗಬೇಕು. ವಿಫಲತೆ ನಮ್ಮಲ್ಲಿ ಬರಬಾರದು ಎಂದರು.
ಶಿಕ್ಷಕರು, ಸಾಹಿತಿ ಅರವಿಂದ ಚೊಕ್ಕಾಡಿ ವಿಷಯ ಮಂಡನೆ ಮಾಡಿದರು.ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ತುಳುಪುಳೆ, ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೊಯ್ಯೂರು, ದ.ಕ.ಜಿಲ್ಲೆ ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿ ಮಹಮ್ಮದ್ ರಿಯಾಜ್ ಉಪಸ್ಥಿತರಿದ್ದರು.
ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜು ಅಧ್ಯಕ್ಷ, ಕಾರ್ಯಕ್ರಮ ಸಂಯೋಜಕರಾದ ಸುಮಂತ್ ಕುಮಾರ್ ಜೈನ್ ಸ್ವಾಗತಿಸಿದರು. ಬೆಳಾಲು ಶ್ರೀ ಧ.ಮಂ.ಪ್ರೌ.ಶಾಲೆ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ನಿರೂಪಿಸಿದರು. ವಿಕಾಸ್ ರಾವ್ಯ ಕನ್ಯಾಡಿ ವಂದಿಸಿದರು.













