ಮಹಿಳೆ ಮಗುವಿಗೆ ಮಾನಸಿಕ ಹಿಂಸೆ- ವರದಕ್ಷಿಣೆ ಕಿರುಕುಳ ಆರೋಪ: ಬೆಳಾಲಿನ ಮಹಿಳೆ ನೀಡಿದ ದೂರಿನಂತೆ ಪತಿ, ಮನೆಯವರ ಮೇಲೆ ಕೇಸು

Suddi Udaya

ಬೆಳ್ತಂಗಡಿ: ತನ್ನನ್ನು ಹಾಗೂ ತನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳದೆ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ, ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅರೋಪಿಸಿ, ಬೆಳಾಲು ಗ್ರಾಮದ ಕೋರ್ದೋಟ್ಟು ನಿವಾಸಿ ಹರ್ಷಿತ ಎಂಬವರು ನೀಡಿದ ದೂರಿನಂತೆ ಆಕೆಯ ಪತಿ ಸೇರಿದಂತೆ ಆರುಮಂದಿಯ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರ್ಷಿತ ಅವರು ಅ.17 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬೆಳಾಲು ಗ್ರಾಮದ ಕೋರ್ದೊಟ್ಟು ನಿವಾಸಿಯಾಗಿರುವ ತನ್ನನ್ನು 2021 ಜ.8ರಂದು ಕಡಬ ತಾಲೂಕು ರಾಮಕುಂಜ ಗ್ರಾಮದ ಅಂಬುಡೇಲು ಮನೆ ಲಕ್ಷ್ಮೀಶ ಬಿ. ಎಂಬವರಿಗೆ ಸ್ವಜಾತಿ ಪದ್ಧತಿಯಂತೆ ವಿವಾಹ ಮಾಡಿ ಕೊಟ್ಟಿದ್ದು, ನಮಗೆ ಸುಮಾರು 3 ವರ್ಷ ಪ್ರಾಯದ ಒಂದು ಗಂಡು ಮಗುವಿದೆ. ವಿವಾಹವಾದ ಬಳಿಕ ನಾನು ಒಂದು ತಿಂಗಳ ಕಾಲ ಗಂಡನ ಜೊತೆ ಚೆನ್ನಾಗಿ ವಾಸವಾಗಿದ್ದು, ನಂತರ ಗಂಡ ಲಕ್ಷ್ಮೀಶ ಬಿ. ಹಾಗೂ ಗಂಡನ ಮನೆಯವರಾದ ಮಾವ ಚೆನ್ನಪ್ಪ ಗೌಡ, ಅತ್ತೆ ಗುಲಾಬಿ, ಬಾವ ರತ್ನಾಕರ, ನಾದಿನಿ ಸರೋಜಿನಿ, ಇನ್ನೋರ್ವ ನಾದಿನಿ ಸುಧಾ ಇವರು 2021 ಎ.6 ರಿಂದ 2022 ಸೆ.19 ರವರೆಗೆ ಉಜಿರೆ ಗ್ರಾಮದ ಉಜಿರೆ ಮತ್ತು ಕಡಬ ತಾಲೂಕು ರಾಮಕುಂಜ ಗ್ರಾಮದ ಅಂಬುಡೇಲು ಎಂಬಲ್ಲಿ ವಿನಾ ಕಾರಣ ನನ್ನನ್ನು ಹಾಗೂ ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳದೇ ಅವಾಚ್ಯ ಗಳಿಂದ ಬೈದು ಮಾನಸಿಕ ಹಿಂಸೆ ಹಾಗೂ ಕೈಯಿಂದ ಮತ್ತು ಮೊಬೈಲ್ ಚಾರ್ಜರ್‌ನಿಂದ ಹಲ್ಲೆ ನಡೆಸಿ ದೈಹಿಕ ಹಿಂಸೆಯನ್ನು ನೀಡಿದ್ದಲ್ಲದೆ ರೂ. 10 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ತಂದು ಕೊಡುವಂತೆ ಬೇಡಿಕೆ ಇಟ್ಟು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ರಿ ದೂರಿನ ವಿಚಾರವನ್ನು, ಕುಟುಂಬದ ಹಿರಿಯರಲ್ಲಿ ಪಂಚಾಯತಿ ಮಾಡಿ ಸಾಂತ್ವಾನ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಲ್ಲಿ ದೂರು ನೀಡಿ ಸಮಸ್ಯೆ ಬಗೆ ಹರಿಯಬಹುದೆಂಬ ಆಶಾಭಾವನೆಯಿಂದ ಈ ದೂರನ್ನು ನೀಡಲು ವಿಳಂಬವಾಗಿರುತ್ತದೆ ಎಂದು ತಿಳಿಸಿದ್ದಾರೆ. ಹರ್ಷಿತ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Leave a Comment

error: Content is protected !!