
ಕೊಕ್ಕಡ :ಇಲ್ಲಿಯ ಮಾಯಿಲಕೋಟೆ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಸಿಕ್ಕಿಹಾಕಿಕೊಂಡ ಘಟನೆ ನ.10ರಂದು ನಡೆದಿದೆ.
ಒಂದು ತಿಂಗಳ ಹಿಂದೆ ಇಲ್ಲಿ ಕಳ್ಳತನ ನಡೆದಿದ್ದು, ಈ ಬಗ್ಗೆ ದೇವಸ್ಥಾನದಲ್ಲಿ ಕಳ್ಳತನ ಮಾಡಿದವರ ಬಗ್ಗೆ ಒಂದು ತಿಂಗಳೊಳಗೆ ಸುಳಿವು ಸಿಗುವಂತೆ ದೇವಸ್ಥಾನದಲ್ಲಿ ಪ್ರಾರ್ಥಿಸಲಾಗಿತ್ತು. ಅಂತೆಯೇ ದೇವರ ಕಾರ್ಣಿಕದಿಂದ ಒಂದು ತಿಂಗಳೊಳಗೆ ಕಳ್ಳರು ಪತ್ತೆಯಾಗಿದ್ದಾರೆ.
ನ.10 ರಂದು ಮಧ್ಯಾಹ್ನದ ಸಮಯ ಕಳ್ಳರು ಕಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ದೊಡ್ಡದಾದ ಶಬ್ದವೊಂದು ಕೇಳಿಸಿದ್ದು ಪರಿಸರದ ಜನರೆಲ್ಲ ಒಟ್ಟಾಗಿ ದೇವಸ್ಥಾನದ ಬಳಿ ತೆರಳಿದಾಗ ಕಳ್ಳ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಎನ್ನಲಾಗಿದೆ. ತಕ್ಷಣ ಸ್ಥಳೀಯರ ಸಹಕಾರದಿಂದ ಕಳ್ಳನನ್ನು ಹಿಡಿದು ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.


ಕಳ್ಳತನಕ್ಕೆ ಯತ್ನಿಸಿದ್ದವನನ್ನು ಹುಬ್ಬಳ್ಳಿಯ ಮಂಜುನಾಥ (19.ವ) ಎಂದು ಗುರುತಿಸಲಾಗಿದ್ದು, ಈತನ ಜೊತೆಗೆ ಸಹಕರಿಸಲು ಇನ್ನಿತರರು ಇದ್ದಾರೆಯೇ ಎಂಬುದನ್ನು ಮುಂದಿನ ತನಿಖೆಯಲ್ಲಿ ತಿಳಿಯಬೇಕಿದೆ.
ಮಾಯಿಲಕೋಟೆಯಲ್ಲಿ ಕಳ್ಳತನ ನಡೆಸುವ ಮೊದಲು ಇಲ್ಲೇ ಸಮೀಪದ ಪುತ್ತೆ ಎಂಬಲ್ಲಿನ ವ್ಯಕ್ತಿ ಒಬ್ಬರ ರೂ 35000 ಬೆಲೆ ಬಾಳುವ ಸೈಕಲನ್ನು ಈತ ಕದ್ದಿದ್ದ ಎನ್ನಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.













