ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ನಮ್ಮಲ್ಲಿ ಉತ್ತಮ ಮೌಲ್ಯಗಳು ಇಲ್ಲವಾದಲ್ಲಿ ಸಾಮಾಜಿಕವಾಗಿ ಪ್ರತಿನಿಧಿಸುವುದು ಕಷ್ಟವಾಗುತ್ತದೆ. ವ್ಯಕ್ತಿಯ ಬದುಕಿನಲ್ಲಿ ಉತ್ತಮ ಮೌಲ್ಯ ರೂಪಿಸುವ ನೆಲೆಯಲ್ಲಿ ಜೆಸಿಐ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತೇಶ್‌ ಇಳಂತಿಲ ಹೇಳಿದರು.

ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜ.28ರಂದು ಆಯೋಜಿಸಲಾದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೆಸಿಐ ವಲಯ 15ರ ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕ ಭರತ್‌ ಶೆಟ್ಟಿ ಮಾತನಾಡಿ, ಬೆಳ್ತಂಗಡಿ ಮಂಜುಶ್ರೀ ಜೆಸಿಐ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಿದೆ. ಹಾಗಾಗಿಯೇ ಹಲವು ಸಾಧಕರ ಕೇಂದ್ರವಾಗಿ ಬೆಳ್ತಂಗಡಿ ಮೂಡಿಬರುತ್ತಿದೆ. ಜೇಸಿಯೊಂದಿಗಿನ ಒಡನಾಟದಿಂದ ನಾವು ತಪ್ಪು ದಾರಿಗೆ ಸಾಗುವುದು ತಪ್ಪುತ್ತದೆ ಎಂದರು.

ವಲಯದ ಜೂನಿಯರ್ ಜೇಸಿ ವಿಭಾಗ ನಿರ್ದೇಶಕ ಸ್ವರಾಜ್ ಶೆಟ್ಟಿ ಮಾತನಾಡಿ, ನಾನು ಎಂಬ ಸ್ವಾರ್ಥವನ್ನು ಬಿಟ್ಟು ನಾವು ಎಂಬ ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕು. ಜೂನಿಯರ್ ಜೇಸಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಲಯದ ಉಪಾಧ್ಯಕ್ಷ ಶಂಕರ್ ರಾವ್, ಜೂನಿಯರ್ ಜೇಸಿ ವಿಭಾಗದ ಅಧ್ಯಕ್ಷ ಸಮನ್ವಿತ್ ಕುಮಾರ್ ಮಾತನಾಡಿದರು. ಜೂನಿಯರ್ ಜೇಸಿ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮನ್ವಿತ್ ಕುಮಾರ್ ಜೂನಿಯರ್ ಜೇಸಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವ
ಸಂಘಟನೆಗಳಾದ ಹಿಂದು ಯುವ ಶಕ್ತಿ ಆಲಡ್ಕ ಹಾಗೂ ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಗಳನ್ನು ಗೌರವಿಸಲಾಯಿತು.

ಯೂತ್ ಡೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಂಜಿತ್ ಎಚ್.ಡಿ. ವಹಿಸಿದ್ದರು. ಪೂರ್ವಾಧ್ಯಕ್ಷ ಚಿದಾನಂದ ಇಡ್ಯಾ ವೇದಿಕೆಗೆ ಆಹ್ವಾನಿಸಿದರು. ಜೂನಿಯರ್ ಜೇಸಿ ಸದಸ್ಯ ಅಭಿಷೇಕ್ ಜೇಸಿ ವಾಣಿ ವಾಚಿಸಿದರು. ಕಾರ್ಯಕ್ರಮ ಸಂಯೋಜಕಿ ಹೇಮಾವತಿ ಕೆ., ಘಟಕದ ಉಪಾಧ್ಯಕ್ಷ ಪ್ರೀತಂ ಶೆಟ್ಟಿ, ಜೂನಿಯರ್ ಜೇಸಿ ಸದಸ್ಯರಾದ ಸಾಹಿತ್ಯ, ರಿತಿಷಾ, ಅನುಷ್ಕಾ, ಶಿವಾನಿ ಪರಿಚಯಿಸಿದರು. ಘಟಕ ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

Leave a Comment

error: Content is protected !!