23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಎಸ್.ಡಿ.ಎಂ. ಪಾಲಿಟೆಕ್ನಿಕ್:‌ ಬಸವರಾಜ ಕಟ್ಟೀಮನಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ

ಉಜಿರೆ:‌ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ-ಬೆಳಗಾವಿ ಹಾಗೂ ಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್‌ ಸಹಭಾಗಿತ್ವದಲ್ಲಿ “ಬಸವರಾಜ ಕಟ್ಟೀಮನಿ ವ್ಯಕ್ತಿತ್ವ ಮತ್ತು ಸಾಹಿತ್ಯ” ಕುರಿತು ವಿಶೇಷ ಉಪನ್ಯಾಸವನ್ನು ಮಾ.1 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕ ಭಾಷಣ ಮಾಡಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಡಾ. ಬಾಳಾಸಾಹೇಬ ಲೋಕಾಪುರ ಅವರು ಕಟ್ಟೀಮನಿಯವರ ಕಾದಂಬರಿಗಳು ಮನೆಯೊಳಗಿನ ವಿಚಾರಕ್ಕಿಂತ ಹೊರ ಜಗತ್ತಿನಲ್ಲಿ ಕಂಡು ಬರುವ ಅಸಮಾನತೆ ಹಾಗೂ ಶೋಷಣೆ ಕುರಿತಾಗಿವೆ. ಆದರೂ ಅವರ ಪ್ರಗತಿಶೀಲ ಚಿಂತನೆಗಳನ್ನು ಇತರರು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ನೋವಿದೆ. ಹಾಗಾಗಿ ಪ್ರತಿಷ್ಠಾನವು ಇಂತಹ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದೆ ಎಂದು ಹೇಳಿದರು. ಜೊತೆಗೆ ಕಾಲೇಜಿನ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಶಿಸ್ತನ್ನು ಪ್ರಶಂಸಿಸಿದರು.


ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಟಿ. ಎನ್‌. ಖಂಡಿಗೆ ಇವರು ಮಾತನಾಡಿ ಪಾಲಿಟೆಕ್ನಿಕ್‌ ಅಥವಾ ಇಂಜಿನಿಯರಿಂಗ್‌ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದ ಜನರಿಗೂ ಬೇಕಾದ ಆಂತರಿಕ ಶಿಸ್ತು ಹಾಗೂ ಮಾನವೀಯತೆಯ ಪಾಠವನ್ನು ಸಾಹಿತ್ಯವು ಒದಗಿಸುತ್ತದೆ ಮತ್ತು ಅನೇಕ ವರ್ಷಗಳೇ ಕಳೆದರೂ ಬಸವರಾಜ ಕಟ್ಟೀಮನಿಯವರ ಸಾಹಿತ್ಯದಲ್ಲಿರುವ ತತ್ವಗಳು ಇಂದಿಗೂ ಪ್ರಸ್ತುತ ಎಂದರು. ಸಮಾಜದ ನೋವಿಗೆ ಸಾಹಿತ್ಯ ಸ್ಪಂದಿಸಬೇಕು ಹಾಗೂ ಇದರ ಮೂಲಕ ಸಾಹಿತಿಗಳು ಮನುಷ್ಯನ ಬದುಕನ್ನು ಸುಧಾರಿಸಬೇಕು ಎಂಬ ನಿಲುವನ್ನು ಅವರು ಹೊಂದಿದ್ದರು ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಹಳೆಮನೆ ರಾಜಶೇಖರ ಅವರು ಮಾತನಾಡಿ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕೆಂಬುದು ‌ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ. ಬಿ ಯಶೋವರ್ಮ ಅವರ ಆಶಯವಾಗಿತ್ತು. ತಂತ್ರಜ್ಞಾನದೊಡನೆ ಮಾನವನಿಗಿರುವ ಸಂಬಂಧ ಸಾಹಿತ್ಯವು ರೂಪಿಸುವ ಮೌಲ್ಯಗಳ ಮೇಲೆ ಅವಲಂಬಿತವಾಗಿದೆ ಎಂದು ಅವರು ನಂಬಿದ್ದರು ಎಂಬುದನ್ನು ನೆನಪಿಸಿಕೊಂಡರು. ಬಸವರಾಜ ಕಟ್ಟೀಮನಿಯವರ ಪ್ರಗತಿಶೀಲ ಚಿಂತನೆಗಳು ಹಾಗೂ ಧೋರಣೆಗಳು ಸಮಾಜಮುಖಿಯಾಗಿದ್ದವು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಎಸ್.ಡಿ.ಎಂ. ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನವಾಗಿರುವ ಬದಲು ಕಟ್ಟೀಮನಿಯವರಂತಹ ಶ್ರೇಷ್ಠ ವ್ಯಕ್ತಿಗಳ ಕೃತಿಗಳನ್ನು ಓದಿ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಭಾಷಾ ಉಪನ್ಯಾಸಕರಾದ ಶಂಕರ ಭಟ್‌ ಎಚ್‌ ಆರ್‌ ಹಾಗೂ ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಈಶ್ವರ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಥಣಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶ್ರೀಯುತ ಝರೆ, ಕಾಲೇಜಿನ ವ್ಯವಸ್ಥಾಪಕರಾದ ಚಂದ್ರನಾಥ್‌ ಜೈನ್‌, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಸ್ಪೂರ್ಥಿ ಸ್ವಾಗತಿಸಿ ಅನನ್ಯ ವಂದಿಸಿದರು ಹಾಗೂ ಚಿರಂತನ್‌ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಮುಳಿಯದಲ್ಲಿ ‘ಮುಳಿಯ ಚಿನ್ನೋತ್ಸವ’ ವಿಶ್ವ ವಿನೂತನ ಚಿನ್ನಾಭರಣಗಳ ಹಬ್ಬಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಜೆಕಾಂ ನೂತನ‌ ಅಧ್ಯಕ್ಷರಾಗಿ ಉದ್ಯಮಿ ವಿಶಾಲ್ ಅಗಷ್ಟೀನ್ ಆಯ್ಕೆ

Suddi Udaya

ಭವಿಷ್ಯದ ಚಿತ್ರರಂಗದ ಭರವಸೆಯ ಕಲಾವಿದ ರಾಜ್ ಚರಣ್ ಬ್ರಹ್ಮಾವರ್

Suddi Udaya

ಪದ್ಮುಂಜ ಸಿಎ ಬ್ಯಾಂಕ್ ಸಿಬ್ಬಂದಿ ಚಿದಾನಂದ ಗೌಡ ನಿಧನ

Suddi Udaya

ಚಾರ್ಮಾಡಿ ಗ್ರಾ.ಪಂ. ಎದುರು ನಿರ್ಮಿತ ಗುಡಿಸಲು ತೆರವುಗೊಳಿಸುವಂತೆ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿ ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ

Suddi Udaya

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!