ಉಜಿರೆ ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಎಂಟನೇ ಚಿಣ್ಣರ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳ ಜೀವನದಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣಲು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅತ್ಯಂತ ಸಹಕಾರಿ. ಇಂದಿನ ಒತ್ತಡಮಯ ಜೀವನದಲ್ಲಿ ಮಕ್ಕಳು ಕೆಟ್ಟ ಆಹಾರ ಪದ್ಧತಿಯ ಕಾರಣದಿಂದ ಅನೇಕ ಮಾನಸಿಕ ದೈಹಿಕ ರೋಗದಿಂದ ಬಳಲುತ್ತಿದ್ದು ಇದಕ್ಕೆ ಯೋಗ ಮತ್ತು ಪ್ರಕೃತಿ ತತ್ವದ ಅಭ್ಯಾಸ ಗಳೇ ಅತ್ಯಂತ ಸಹಕಾರಿ ಎಂದು SDM ಶಿಕ್ಷಣ ಸಂಸ್ಥೆಗಳ IT ಹಾಗೂ ವಸತಿ ನಿಲಯಗಳ ಕಾರ್ಯನಿರ್ವಹಣಾ ಅಧಿಕಾರಿಗಳಾದ ಪೂರಣ್ ವರ್ಮ ಉದ್ಘಾಟಿಸಿ ಮಾತನಾಡಿದರು.

ಪೌಷ್ಟಿಕ ಆಹಾರ ಹಾಗೂ ಉತ್ತಮ ಜೀವನ ಶೈಲಿಯು ಎಲ್ಲಾ ರೀತಿಯ ಋಣಾತ್ಮಕ ಅಂಶಗಳನ್ನು ದೂರಮಾಡಲು ಈ ರೀತಿಯ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು ಅತೀವ ಅವಶ್ಯ ಎಂದು ಅವರು ನುಡಿದರು.
ಅಧ್ಯಕ್ಷ ಸ್ಥಾನ ವಹಿಸಿದ್ದ ವಿದ್ಯಾಸಂಸ್ಥೆಯ ಪ್ರಾಚಾರ್ಯ ರಾದ ಡಾ. ಪ್ರಶಾಂತ್ ಶೆಟ್ಟಿಯವರು ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ 80ರ ದಶಕಲ್ಲಿಯೇ ಶಿಬಿರಗಳ ಮೂಲಕಪೂಜ್ಯ ಹೆಗ್ಗಡೆ ಯವರ ದೂರ ದರ್ಶಿತ್ವ ದ ಫಲವಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪರಿಚಯ ಮತ್ತು ಪ್ರಚಾರ ನಿರಂತರ ನಡೆಯುತ್ತಿದೆ.
ಮಕ್ಕಳಲ್ಲಿನ ದಿವ್ಯಶಕ್ತಿಯ ಜಾಗೃತಿಗಾಗಿ ನಡೆಯುತ್ತಿರುವ ಈ ಶಿಬಿರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಡಾ.ಪ್ರಶಾಂತ್ ಶೆಟ್ಟಿ ನುಡಿದರು. ಈ ಶಿಬಿರ ಮೂರು ದಿನಗಳ ಕಾಲ ನಡೆಯಲಿದ್ದು ಯೋಗ ಮತ್ತು ಪ್ರಕೃತಿಯ ಚಿಕಿತ್ಸೆಯ ಮೂಲತತ್ವವನ್ನು ಅರಿಯಲು ಸೂಕ್ಷ್ಮ ವ್ಯಾಯಾಮ, ಯೋಗಾಸನಗಳು, ಪ್ರಾಣಾಯಾಮ, ಜುಂಬ ಡ್ಯಾನ್ಸ್ , ಪೇಪರ್ ಕ್ರಾಫ್ಟ್ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದ ಸಂಚಾಲಕರಾದ ಹಾಗೂ ಯೋಗ ವಿಭಾಗದ ಡೀನ್, ಹಾಗೂ ಶಾಂತಿವನದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಶಿಬಿರದ ಚಟುವಟಿಕೆಗಳನ್ನು ವಿವರಿಸಿ ಸ್ವಾಗತಿಸಿದರು. ಯೋಗ ವಿಭಾಗದ ಸಹಪ್ರಾಧ್ಯಾಪಕ ಉದಯ ಸುಬ್ರಹ್ಮಣ್ಯ ವಂದನಾರ್ಪಣೆಗೈದರು. ಯೋಗ ವಿಭಾಗ ಹಾಗೂ ಆಹಾರ ಮತ್ತು ಪೌಷ್ಟಿಕತೆ ವಿಭಾಗದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸಹಕರಿಸಿದರು.












