
ಉಜಿರೆ : ಹುಬ್ಬಳ್ಳಿ ಕೆಬಿವಿ ಕಾಲೇಜಿನಲ್ಲಿ ನಡೆದ ನೇಹಾ ಹೀರೆಮಠ ಹತ್ಯೆ ಖಂಡಿಸಿ ಎ.22 ರಂದು ಉಜಿರೆ ಸರ್ಕಲ್ ನಲ್ಲಿ ಎಬಿವಿಪಿ ಬೆಳ್ತಂಗಡಿ ಘಟಕದ ವತಿಯಿಂದ ಕಪ್ಪುಪಟ್ಟಿ ಪ್ರದರ್ಶಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ವಿಭಾಗ ಕೇಲ್ ಪ್ರಮುಖ್ ಸುವಿತ್ ಶೆಟ್ಟಿ ಮಾತನಾಡಿ ನೇಹಾ ಹೀರೆಮಠ ಪ್ರೇಮವನ್ನು ಒಪ್ಪಿಕೊಳ್ಳದ ಕಾರಣ ಆಕೆಯನ್ನು ಫಯಾಜ್ ಎಂಬಾತ ಹತ್ಯೆ ಮಾಡುತ್ತಾನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಉಡುಪಿಯ ಪ್ರಕರಣಗಳಿರಬಹುದು, ಕಡಬದಲ್ಲಿ ಮೂವರು ಹೆಣ್ಣು ಮಕ್ಕಳ ಮೇಲೆ ಒಬ್ಬ ಜಿಹಾದಿ ಆಸಿಡ್ ದಾಳಿ ಮಾಡಿದ ಪ್ರಕರಣ ಇರಬಹುದು, ಹಾಗೇ ಮೊನ್ನೆ ಕೆವಿಬಿ ಕಾಲೇಜ್ ನಲ್ಲಿ ನೇಹಾಳ ಹತ್ಯೆ ಇರಬಹುದು, ರಾಜ್ಯ ಸರ್ಕಾರ ಏನು ಮಾಡುತ್ತಿದೆ?
ರಾಜ್ಯ ಸರ್ಕಾರದ ಪ್ರತಿನಿಧಿ ಗೃಹ ಸಚಿವರು ಒಂದು ಸ್ಟೇಟ್ ಮೆಂಟ್ ನ್ನು ನೀಡುತ್ತಾರೆ, ಅದೇನು ದೊಡ್ಡ ವಿಷಯವಲ್ಲ, ಯಾವಾಗಲೂ ಆಗುತ್ತದೆ ಎಂಬುದಾಗಿ, ವಿದ್ಯಾರ್ಥಿಗಳ ಪ್ರಾಣ ಎಂದರೆ ಇವರಿಗೆ ಲೆಕ್ಕಕ್ಕೆ ಇಲ್ವಾ? ಸರ್ಕಾರದ ಓಲೈಕೆ ರಾಜಕಾರಣದಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿದೆ.

ಶುಕ್ರವಾರ ವಿದ್ಯಾರ್ಥಿ ಪರಿಷತ್ ನ ಕಾರ್ಕಳ ಘಟಕದ ಕಾರ್ಯಕರ್ತರು ದೊಂದಿ ಮೆರವಣಿಗೆ ಮೂಲಕ ಹೋರಾಟ ಮಾಡುತ್ತಾರೆ ಹೋರಾಟ ಮಾಡಿದಂತಹ ಹೋರಾಟಗಾರರನ್ನು ಅಲ್ಲಿನ ಪೊಲೀಸರು ತಡೆದು ಅವರ ಮೇಲೆ ಎಫ್ ಐಆರ್ ಹಾಕುವಂತಹ ಕೆಲಸ ಮಾಡಿದ್ದಾರೆ. ತಕ್ಷಣ ಕಾರ್ಯಕರ್ತರ ಮೇಲೆ ಹಾಕಿದಂತಹ ಎಫ್ ಐ ಆರ್ ನ್ನು ತೆಗೆಯಬೇಕು, ಇಲ್ಲವಾದರೆ ಮುಂದಿನ ದಿವಸಗಳಲ್ಲಿ ಆಗುವಂತಹ ಪರಿಣಾಮಕ್ಕೆ ನೇರವಾಗಿ ರಾಜ್ಯ ಸರ್ಕಾರ ಹೊಣೆ.

ಎಬಿವಿಪಿಯ ಹೋರಾಟವನ್ನು ಸೂಕ್ತ ರೀತಿಯಿಂದ ಗಮನಿಸಿ, ಕಾರ್ಯಕರ್ತ ಮೇಲೆ ಹಾಕಿದ ಎಫ್ಐಆರ್ ತೆಗೆಸಿ, ನೇಹಾಳನ್ನು ಹತ್ಯೆ ಮಾಡಿದ ಫಯಾಜ್ ನ್ನು ಎನ್ಕೌಂಟರ್ ಮಾಡಿ ಮುಂದೆ ಈ ರೀತಿಯ ಘಟನೆಗಳು ಆಗದ ರೀತಿಯಲ್ಲಿ ನೋಡಿಕೊಳ್ಳಿ ಎಂದು ಹೇಳಿದರು.
ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರಾದ ರಕ್ಷಿತ್, ಸೆಬಾಸ್ಟಿನ್, ಮಲ್ಲಿಕಾರ್ಜುನ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.












