ಬಳಂಜ: ಸನಾತನ ಸಂಸ್ಥೆಯಿಂದ ವಿಶೇಷ ಪ್ರವಚನ

Suddi Udaya

ಬಳಂಜ:ಹೀನಾನಿ ಗುಣಾನಿ ದೂಷಯತಿ ಇತಿ ಹಿಂದು ಅಂದರೆ ಹೀನ ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕ ಜೀವನ ನಡೆಸುವವನೆ ಹಿಂದೂ. ಹಿಂದೂ ರಾಷ್ಟ್ರ ಎಂದರೆ ಇಂತಹ ಸಾತ್ವಿಕ ಜನತೆಯುಳ್ಳ ರಾಷ್ಟ್ರವಾಗಿರುತ್ತದೆ. 2025ರ ನಂತರ ಭಾರತದಲ್ಲಿ ವಿಶಾಲ ಹಿಂದೂ ರಾಷ್ಟ್ರ ಸ್ಥಾಪನೆ ಆರಂಭವಾಗಲಿದೆ. ಈ ಸಾತ್ವಿಕ ರಾಷ್ಟ್ರವು ನಿರ್ಮಾಣವಾಗಬೇಕಿದ್ದರೆ ಈಗಿನಿಂದಲೇ ಸಾಧನೆಯನ್ನು ಆರಂಭಿಸಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಇವರು ಕರೆ ನೀಡಿದರು.

ಅವರು ಜೂ. 12ರಂದು ಸನಾತನ ಸಂಸ್ಥೆಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಪ್ರವಚನದಲ್ಲಿ ಮಾತನಾಡಿದರು.

ಹಿಂದೆ ಗುರುವಿನ ಮೂಲಕ ಜ್ಞಾನವನ್ನು ಪಡೆದು ಶಿಷ್ಯರು ಸಾಧನೆಯನ್ನು ಮಾಡುತ್ತಿದ್ದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಹಕ್ಕ ಬುಕ್ಕರು ಸಹ ತಮ್ಮ ರಾಜ್ಯ ಸ್ಥಾಪನೆಯನ್ನು ಮಾಡುವಾಗ ಗುರುಗಳ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದರು. ಇದರಿಂದಾಗಿ ಅವರ ಧರ್ಮಸಂಸ್ಥಾಪನೆಯ ಕಾರ್ಯವು ಪೂರ್ಣವಾಯಿತು. ಪ್ರಸ್ತುತ ಕಾಲದಲ್ಲಿ ಅನೇಕ ದಾರ್ಶನಿಕರು, ಸಂತರು ಮತ್ತು ಸ್ವತಃ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರೂ ಸಹ ಭಾರತ 2025 ರ ನಂತರ ಹಿಂದೂ ರಾಷ್ಟ್ರದ ಉದಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೇವಲ ಶಾರೀರಿಕ, ಮಾನಸಿಕ ಸ್ತರದಲ್ಲಿ ಪ್ರಯತ್ನ ಮಾಡುವುದಷ್ಟೇ ಅಲ್ಲದೆ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಬಲವನ್ನೂ ಹೆಚ್ಚಿಸಬೇಕಿದೆ ಹಾಗಾಗಿ ನಾವು ಈ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಗುರುಗಳ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದರೆ ಯಶಸ್ಸು ಖಂಡಿತ ಸಿಗುವುದು ಎಂದರು. ಕೊನೆಗೆ ಅವರು “ಧರ್ಮೋ ರಕ್ಷತಿ ರಕ್ಷಿತಃ” ಅಂದರೆ ಧರ್ಮ ಉಳಿಯಬೇಕಾದರೆ ನಾವೆಲ್ಲ ಹಿಂದೂಗಳು ಧರ್ಮಚರಣೆಯನ್ನು ಮಾಡಬೇಕು ಉದಾಹರಣೆಗೆ ಕುಂಕುಮ ಹೇಗೆ ಮತ್ತು ಏಕೆ ಇಡಬೇಕು, ದೇವಸ್ಥಾನದ ದರ್ಶನ ಹೇಗೆ ಮಾಡಬೇಕು ? ಸ್ತ್ರೀಯರು ಆಭರಣಗಳನ್ನು ಹೇಗೆ ಧರಿಸಬೇಕು ? ಇಂತಹ ಧರ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಶಿಕ್ಷಣ ಪಡೆಯಬೇಕು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಬೇಕು ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ ಕುಮಾರ್ ಇವರು ಇಂದು ದೇಶದಲ್ಲಿ ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ವಕ್ಫ್ ಕಾಯ್ದೆ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಬೆಳೆಯುತ್ತಿರುವ ಹೊಸ ಪೀಳಿಗೆಗಳಿಗೆ ಧರ್ಮದ ಕುರಿತು ಜ್ಞಾನ ಸಿಗದಿರುವುದೇ ಈ ಅಧರ್ಮಾಚರಣೆಗೆ ಮೂಲ ಕಾರಣವೆಂದು ತೋರುತ್ತಿದೆ. ಅನ್ಯ ಧರ್ಮೀಯರಿಗೆ ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮದ ಶಿಕ್ಷಣ ಪಡೆಯುವ ಅವಕಾಶವಿದೆ, ಆದರೆ ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದ ಕಾರಣ ಅವರು ಧರ್ಮದಿಂದ ದೂರವಾಗುತ್ತಿದ್ದಾರೆ. ಈ ಕೊರತೆಯನ್ನು ನೀಗಿಸಲು ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ದೇಶದಾದ್ಯಂತ ಉಚಿತ ಧರ್ಮಶಿಕ್ಷಣ ವರ್ಗಗಳನ್ನು ನಡೆಸುತ್ತಿದ್ದು ಹಳ್ಳಿ ಹಳ್ಳಿಗಳಲ್ಲಿ ಹಿಂದುಗಳಲ್ಲಿ ಧರ್ಮದ ಆಚರಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವಾರ ನಡೆಯುವ ಈ ವರ್ಗಗಳಲ್ಲಿ ಧರ್ಮದ ಕುರಿತಾದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಆದ್ದರಿಂದ ಬಳಂಜದಲ್ಲಿಯೂ ಈ ಧರ್ಮಶಿಕ್ಷಣ ವರ್ಗಗಳನ್ನು ಪ್ರಾರಂಭಿಸುವವರಿದ್ದು ಆಸಕ್ತರು ಸಹಭಾಗಿ ಆಗಬಹುದು ಎಂದರು

Leave a Comment

error: Content is protected !!