23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಕಾಳಜಿಯ ಯಶಸ್ವೀ ಪ್ರಯೋಗಗಳು

ಬೆಳಾಲು: ಪರಿಸರ ಮತ್ತು ಜಲ ಸಂರಕ್ಷಣೆಯ ಕಾಳಜಿ ಇಂದಿನ ಅಗತ್ಯದ ಕಾರ್ಯಗಳಾಗಿವೆ. ಆದರೆ ಈ ಬಗ್ಗೆ ಗಂಭೀರ ಪ್ರಯತ್ನಗಳಾಗಲಿ, ನಿರಂತರ ಪ್ರಯೋಗಗಳಾಗಲಿ ನಡೆಯುತ್ತಿರುವುದು ವಿರಳವೆಂದೇ ಹೇಳಬಹುದು. ಹೇಳಿಕೆಗಳು, ವಾರ್ಷಿಕ ಸ್ಮರಣೆಯಂತೆ ಆಯೋಜನೆಗೊಳ್ಳುತ್ತಿರುವ ವನಮಹೋತ್ಸವ… ಪರಿಸರ ಸಂರಕ್ಷಣೆಯ ಪಾಠ, ಜಲಸಂರಕ್ಷಣೆಯ ಮಾದರಿಗಳು ಧಾರಾಳವಾಗಿ ಕಾಣಸಿಗುತ್ತದೆ. ಶೈಕ್ಷಣಿಕ ಕಾರ್ಯಕ್ರಮವಾಗಿಯೂ ಎಲ್ಲೆಡೆ ಜರಗುತ್ತಲಿವೆ. ಒಳ್ಳೆಯದೆ… ಆದರೆ ನಮಗೆ ಬೇಕಾದ್ದು ಮಾದರಿ ಕಾರ್ಯಕ್ರಮಗಳಲ್ಲ, ನೈಜ ಕಾಳಜಿಯ ಪ್ರಯೋಗಗಳು. ಇಂತದ್ದಕ್ಕೆಲ್ಲ ಉದಾಹರಣೆಯಾಗಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಪರಿಸರ ಮತ್ತು ಜಲಸಂರಕ್ಷಣೆಯ ಕಾರ್ಯಗಳು ಮಾದರಿಯಾಗಿದೆ.

ಬೆಳಾಲು ಪ್ರೌಢಶಾಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಶ್ರೀ ಪಡ್ರೆಯವರಿಂದ ನಡೆದ ಜಲಸಂರಕ್ಷಣೆಯ ಕಾರ್ಯಾಗಾರದ ಫಲ ರೂಪವಾಗಿ, ಇವತ್ತು ಬೆಳಾಲು ಪ್ರೌಢಶಾಲೆಯು ಸುಂದರ ಪರ್ಯಾವರಣ ಪ್ರದೇಶವಾಗಿ ಕಂಗೊಳಿಸುತ್ತಿದೆ.

ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ, ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ಟರ ನೇತೃತ್ವದಲ್ಲಿ, ಶಿಕ್ಷಕರ ಕ್ರಿಯಾಶೀಲತೆಯಿಂದಾಗಿ ಶಾಲಾವರಣವು ಸ್ವಚ್ಛ…ಹಚ್ಚಹಸಿರಿನ, ಎಲ್ಲೆಂದರಲ್ಲಿ ಹರಿಯುವ ನೀರು ಅಲ್ಲಲ್ಲೇ ಇಂಗುವ ಮಾದರಿ ಆವರಣವಾಗಿದೆ.

ಬೆಳಾಲು ಪ್ರೌಢಶಾಲೆಯ ಜಲಸಂರಕ್ಷಣೆಯ ಪ್ರಯೋಗಗಳು ಇದೀಗ ನಿತ್ಯ ಪಾಠ ಹೇಳುವ ತಾಣಗಳಾಗಿವೆ. ಗಿಡ ನೆಡುವ ಕಾರ್ಯಕ್ರಮ ಮಾಡಿ, ಇಕೊ ಕ್ಲಬ್ ರಚಿಸಿ… ವರದಿ ನೀಡಿ ಎಂದು ಶಿಕ್ಷಣ ಇಲಾಖೆ ಏನು ಹೇಳುತ್ತದೊ ಅದನ್ನು ವಿಶಿಷ್ಟ ರೀತಿಯಲ್ಲಿ ಜಾರಿಗೊಳಿಸಿ, ಅದನ್ನೇ ಶಾಶ್ವತ ಕಾರ್ಯಗಳನ್ನಾಗಿಸಿದೆ.

ಸದ್ಯ ಬೆಳಾಲು ಪ್ರೌಢಶಾಲೆಯ ಎಂಟೂವರೆ ಎಕರೆ ವಿಸ್ತೀರ್ಣದಲ್ಲಿ ಮೈದಾನ, ರಸ್ತೆ, ಕಟ್ಟಡ ಹೊರತುಪಡಿಸಿದರೆ ಮತ್ತೆ ಕಾಣುವುದು ಬರೀ ಹಸಿರು ಹಸಿರು. ಆರಂಭದಲ್ಲಿ ನೀರು ಸಹಜವಾಗಿ ಹರಿದು ಹೋಗುವ ಪ್ರದೇಶವನ್ನು ಗುರುತಿಸಿಕೊಂಡು ಅಲ್ಲೆಲ್ಲ ಸಣ್ಣದು,ದೊಡ್ಡದು, ಉದ್ದದ, ಸರಪಣಿ ಹೊಂಡಗಳ ಮೂಲಕ ಜೊತೆಗೆ ಸಸಿ ನೆಡುವ ಕೆಲಸ ಮಾಡಲಾಗಿತ್ತು. ಜಲಸಂರಕ್ಷಣೆಯ ಕೃತಕ ಪ್ರಯೋಗಗಳು ಇದೀಗ ಶಾಶ್ವತ ಮಾದರಿಗಳಾಗಿ, ಹಸಿರು ತುಂಬಿಕೊಳ್ಳುತ್ತಾ ಸಹಜವಾಗಿ ನೀರಿಂಗುವಿಕೆಯ ಪ್ರದೇಶವಾಗಿ ಪರಿವರ್ತಿತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಸುತ್ತಮುತ್ತ, ಆಟದ ಮೈದಾನದ ಬದಿಯುದ್ದಕ್ಕೂ ಮಾವು, ಹಲಸು, ಹೆಬ್ಬಲಸು, ಪುನರ್ಪುಳಿ, ರೆಂಜ, ನೇರಳೆ ಇತ್ಯಾದಿ ಇನ್ನೂರಕ್ಕಿಂತಲೂ ಅಧಿಕ ಕಾಡು ಹಣ್ಣುಹಂಪಲು ಸಸ್ಯಗಳನ್ನು ಬೆಳೆಸಲಾಗಿದ್ದು, ಪ್ರಸ್ತುತ ಶಾಲೆಯು ಸಮೃದ್ಧ ಸಸ್ಯ ಶ್ಯಾಮಲೆಯಾಗಿದೆ.

ಇಲ್ಲಿ ನೋಡಲೇಬೇಕಾದ ಇನ್ನೊಂದು ತಾಣವೆಂದರೆ ಮದಕ. ಕಳೆದ ವರ್ಷ ರೂಪುಗೊಂಡ ಈ ಮದಕವು ಇದೀಗ ತುಂಬಿ ತುಳುಕುತ್ತಾ ನೋಡುಗರನ್ನು ಪುಳಕಿತಗೊಳಿಸುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ; ಶಿಕ್ಷಣ ಕೇಂದ್ರವೊಂದು ಜಲಸಂರಕ್ಷಣೆಯ ಮೂಲಕ ಊರಿಗೇ ಬದುಕಿನ ಪಾಠ ಹೇಳುವ ತಾಣವಾಗಿ ರೂಪುಗೊಂಡದ್ದು ಹೆಮ್ಮೆಯ ಸಂಗತಿಯಾಗಿದೆ.

Related posts

ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ಮನಸೋತು ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು

Suddi Udaya

ಉಜಿರೆ ಅನು ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಶುಭಾರಂಭ – ಭಗವಂತನ ಅನುಗ್ರಹದಿಂದ ಸಂಸ್ಥೆಯು ಪ್ರಗತಿ ಪಥದಲ್ಲಿ ಸಾಗಲಿ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ ಶಾಂತಿ ಸಭೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಯ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!