ಕೊಕ್ರಾಡಿ ಸರಕಾರಿ ಪ್ರೌಢಶಾಲೆ ಪುಸ್ತಕ ವಿತರಣೆ ಮತ್ತು ಪೋಷಕರ ಸಭೆ

Suddi Udaya

ಕೊಕ್ರಾಡಿ : ಇಲ್ಲಿಯ ಸರಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಬರೆಯುವ ಪುಸ್ತಕ ವಿತರಣೆ ಮತ್ತು ಪೋಷಕರ ಸಭೆಯು ಇತ್ತೀಚೆಗೆ ಜರಗಿತು.

ಕಾರ್ಯಕ್ರಮದಲ್ಲಿ ಕೊಕ್ರಾಡಿ ಹೈಸ್ಕೂಲ್ ಬೆಟರ್ ಮೆಂಟ್ ಟ್ರಸ್ಟ್ ಇದರ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಡಂಗೆ, ಕೊಕ್ರಾಡಿ ಇವರು ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೇರಕವಾಗಿ ಪುಸ್ತಕ ವಿತರಣೆಯನ್ನು ಮಾಡಿ, ನಂತರ ಮಾತನಾಡಿ ಸರಕಾರಿ ಪ್ರೌಢಶಾಲೆ, ಕೊಕ್ರಾಡಿ ಶಾಸಕ ಹರೀಶ್ ಪೂಂಜರ ಅನುದಾನ ಮತ್ತು ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಅಂದಾಜು ರೂ 2.40 ಕೋಟಿ ವೆಚ್ಚದಲ್ಲಿ ಅತ್ಯುತ್ತಮ ಶಾಲಾ ಕಟ್ಟಡವನ್ನು ಸದ್ಯದಲ್ಲಿ ಹೊಂದಲಿದ್ದು, ಸರ್ಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯತೆ, ಶಾಲಾ ಅಭಿವೃದ್ಧಿ ಸಮಿತಿಯ ಮುಂದಾಳತನ ಅತ್ಯಂತ ಅಗತ್ಯವಾಗಿದ್ದು ಈ ಮಹಾನ್ ಕಾರ್ಯದಲ್ಲಿ ಎಲ್ಲರೂ ಹುರುಪಿನಿಂದ ಕೈಜೋಡಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ಶ್ರೀ ಸತ್ಯ ದೇವತೆ ದೈವಸ್ಥಾನ, ಅಳದಂಗಡಿ ಇದರ ಆಡಳಿತ ಮೊಕ್ತೇಸರರಾದ ಶಿವಪ್ರಸಾದ ಅಜಿಲ ,ಅಳದಂಗಡಿ ಇವರು ಪ್ರತಿವರ್ಷದಂತೆ ಅತ್ಯಂತ ಪ್ರೀತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಕಳುಹಿಸಿದ ನೋಟ್ ಬುಕ್ ಗಳನ್ನು ಸಹ ಸಾಂಕೇತಿಕವಾಗಿ ವಿತರಿಸಿ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೊಕ್ರಾಡಿ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸ ಪೂರಕ ಚಟುವಟಿಕೆಯಾಗಿ ನೋಟ್ ಬುಕ್ ಗಳನ್ನು ವಿತರಿಸುತ್ತಿದ್ದು ಸಂಸ್ಥೆಯ ಪೋಷಕರ ವಿದ್ಯಾರ್ಥಿಗಳ ಮತ್ತು ಆಧ್ಯಾಪಕವೃಂದದ ಹೃದಯಾಂತರಾಳದ ಕೃತಜ್ಞತೆಗಳನ್ನು ಸಮರ್ಪಿಸಿದರು.


ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸಿ ಯ ಅಧ್ಯಕ್ಷ ಮೋಹನ್ ಅಂಡಿಂಜೆ, ಲಕ್ಷ್ಮಣ ಪೂಜಾರಿ ಕೊಕ್ರಾಡಿ, ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಂತಿ, ಹರೀಶ್ ಹೆಗ್ಡೆ ಮತ್ತು ಶ್ರೀಮತಿ ಶೋಭಾ ಭಾಗವಹಿಸಿದ್ದರು. ಶ್ರೀಲಂಕಾದ ಕೊಲಂಬೋದಲ್ಲಿ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಕನ್ನಡ ಶಿಕ್ಷಕಿ, ಶ್ರೀಮತಿ ಅಕ್ಕಮ್ಮ ಇವರಿಗೆ ಶುಭಾಶಯಗಳನ್ನು ಸಲ್ಲಿಸಲಾಯಿತು. ಅವಧಿ ಮುಗಿದಿರುವ ಎಸ್.ಡಿ.ಎಂ.ಸಿ ಸದಸ್ಯರ ಬದಲಿ ಆಯ್ಕೆಯನ್ನು ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಎಚ್.ಎಸ್. ಶ್ರೀಕೃಷ್ಣ ಸ್ವಾಗತಿಸಿ, ಅಧ್ಯಾಪಕ ಮಹಮ್ಮದ್ ರಿಯಾಜ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Leave a Comment

error: Content is protected !!