ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಬೆಳ್ತಂಗಡಿ: ಸೆ. 8 ರಂದು ಉಜಿರೆಯ ಗಣೇಶ ಚತುರ್ಥಿ ಹಬ್ಬದ ಸಾರ್ವಜನಿಕ ಸಮಾರಂಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ ವಿಷಯ ಜಾತಿ ವೈಮನಸ್ಸು ಉಂಟುಮಾಡಲು,ಸಮುದಾಯಗಳ ನಡುವೆ ಅಶಾಂತಿ ಹಾಗೂ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದ್ದು, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಜಿರೆಯ ಅಜಿತ್ ಹೆಗ್ಡೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಣೇಶ ಚೌತಿಯ ಹಬ್ಬದ ಧಾರ್ಮಿಕ ಸಮಾರಂಭದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ, ಟೀಕೆ ಮಾಡಿ, ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಜೈನ ಮತ್ತು ಹಿಂದೂ ಸಮುದಾಯದ ನಡುವೆ ಅಶಾಂತಿಯನ್ನು ಪ್ರೇರೇಪಿಸಲು ಮತ್ತು ಅಪಾಯಕರವಾದ ಪರಿಸರವನ್ನು ನಿರ್ಮಿಸಲು ಉದ್ದೇಶಿಸಿರುವುದು ಸ್ಪಷ್ಟವಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸಮುದಾಯಗಳನ್ನು ಬೆದರಿಸಿರುವುದಲ್ಲದೆ ಹಲವಾರು ದೇವರ ಮತ್ತು ದೇವಸ್ಥಾನ ಮೊದಲಾದ ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಅವಹೇಳನ ಪೂರ್ಣ ಶಬ್ದಗಳನ್ನು ಬಳಸಿ, ಜೈನ ವರ್ಗದ ಜನರ ಮತ್ತು ಜೈನ ಸಮುದಾಯಗಳ ಸಂಸ್ಥೆಗಳ ಮೇಲಿನ ಗೌರವವನ್ನು ಕುಗ್ಗಿಸಲು ಯತ್ನಿಸಿಸಲಾಗಿದೆ.

ಜೈನ ಹಾಗೂ ಹಿಂದೂ ಬಾಂಧವರ ಮಧ್ಯೆ ಜಾತಿ-ಧರ್ಮದ ಆಧಾರದಲ್ಲಿ ವೈರತ್ವ ಬೆಳೆಸುವ ದೊಡ್ಡ ಮಟ್ಟದ ಹಾಗೂ ದೂರಗಾಮಿ ಹುನ್ನಾರ ಮಾಡಲಾಗಿದೆ. ಇದು ಏಕತೆಗೆ ಮಾರಕವಾದ ದುರುದ್ದೇಶ ಎಂದು ದೂರಿನಲ್ಲಿ ತಿಳಿಸಿದ್ದಾರೆ.

“ಮೊದಲಿನಿಂದಲೂ ಭಾರತದ ಮೇಲೆ ಇಲ್ಲಿ ಎಷ್ಟೆಷ್ಟು ದಾಳಿಗಳಾಗಿವೆ? ಪೋರ್ಚರು, ಡಚ್ಚರು,ಫ್ರೆಂಚರು, ಅವರು, ಇವರು ಮೊಗಲರು, ಬ್ರಿಟಿಷರು, ಇವತ್ತು ಜೈನರು ಕೂಡಾ ಸ್ವತಂತ್ರ ಭಾರತದಲ್ಲಿ ಸನಾತನವಾದ ಹಿಂದೂ ಧರ್ಮವನ್ನು ಹಿಂದೂ ದೇವಾಸ್ಥಾನಗಳನ್ನು ಅದರ ದಾಖಲೆಗಳನ್ನು ನಾಶ ಮಾಡಿ ಇವತ್ತು ಜೈನರ ವಶ ಮಾಡಿಕೊಂಡಿದ್ದಾರಲ್ಲಾ… ಏನು ಹೇಳುತ್ತದೆ ಈ ಹಿಂದೂ ಸಮಾಜ?, ಏನು ಹೇಳುತ್ತದೆ ಈ ದೇಶದ ವಿಶ್ವ ಹಿಂದೂ ಪರಿಷತ್, ಏನು ಹೇಳುತ್ತದೆ? ಈ ದೇಶದ ಭಜರಂಗದಳ, ಏನು ಹೇಳುತ್ತದೆ? ಹಿಂದೂ ಸಂಘಟನೆಗಳು, ನಮ್ಮನ್ನು ಸಾಕಿ ಬೆಳೆಸಿದಂತಹ ಮಹೋನ್ನತ ಸಂಘಟನೆ ಆರ್.ಎಸ್.ಎಸ್. ಏನು ಹೇಳುತ್ತದೆ ಇವತ್ತು”?, ಮತ್ತು “ಒಟ್ಟು 0.04% ಇರುವ ಜೈನರು ಇವತ್ತು 86% ಇರುವ ಹಿಂದೂಗಳನ್ನು ಮೂರ್ಖರನ್ನಾಗಿಸಿದ್ದಾರೆ”. ಮತ್ತು “ಮುಂದಿನ ದಿನಗಳಲ್ಲಿ ಕ್ರಾಂತಿಯಾಗುತ್ತದೆ”.

ಈ ಪ್ರಚೋದನಾಕಾರಿ ಹೇಳಿಕೆಗಳು ಸಾರ್ವಜನಿಕವಾಗಿ ಕಾಳಿಚ್ಚಿನಂತೆ ಹರಿದಾಡುತ್ತಿದ್ದು ನನಗೆ ಅಭದ್ರತೆಯ ಭಾಸವಾಗುತ್ತಿದೆ ಇದರ ಬಗ್ಗೆ
ತ್ವರಿತವಾಗಿ ತನಿಖೆ ನಡೆಸಿ ಸಾರ್ವಜನಿಕ ಶಾಂತಿ ಮತ್ತು ನ್ಯಾಯಕ್ಕಾಗಿ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Leave a Comment

error: Content is protected !!