23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ : ಲೆಕ್ಕಪತ್ರ ಮಂಡನೆ, ಸ್ಮರಣಸಂಚಿಕೆ ಬಿಡುಗಡೆ

ಉಜಿರೆ: ಧರ್ಮ ಪ್ರಭಾವನೆಯೊಂದಿಗೆ ಜೈನರ ಆಚಾರ-ವಿಚಾರಗಳು, ಧರ್ಮ ಮತ್ತು ಸಂಸ್ಕೃತಿಯ ಬಗ್ಯೆ ಅರಿವು, ಜಾಗೃತಿ ಮೂಡಿಸುವುದೇ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಉದ್ದೇಶವಾಗಿದೆ ಎಂದು ಜೈನಕಾಶಿ ಮೂಡಬಿದ್ರೆಯ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು.


ಅವರು ಡಿ.15 ರಂದು ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ2024ರ ಫೆಬ್ರವರಿ 22 ರಿಂದ ಮಾರ್ಚ್ ಒಂದರ ವರೆಗೆ ನಡೆದ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಸ್ಮರಣಾರ್ಥ ಪ್ರಕಟಿಸಿದ “ಸಿರಿ ಬಾಹುಬಲಿ” ಸ್ಮರಣಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.


ಮನ, ವಚನ, ಕಾಯದಿಂದ ಅಹಿಂಸೆಯ ಪರಿಪಾಲನೆ ಹಾಗೂ “ಬದುಕು ಮತ್ತು ಬದುಕಲು ಬಿಡು” ಎಂಬುದು ಜೈನಧರ್ಮದ ಸಾರವಾಗಿದ್ದು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ಭಗವಾನ್ ಬಾಹುಬಲಿ ಸಾಧಿಸಿ ತೋರಿಸಿದ್ದಾರೆ.
ವಿವಿಧ ಸಮಿತಿಗಳ ಸಕ್ರಿಯ ಸಹಕಾರ, ಸರ್ಕಾರದ ನೆರವು ಹಾಗೂ ದಾನಿಗಳ ಉದಾರ ಕೊಡುಗೆಯಿಂದ ಮಸ್ತಕಾಭಿಷೇಕ ಯಶಸ್ವಿಯಾದ ಬಗ್ಯೆ  ಅವರು ಸಂತಸ ವ್ಯಕ್ತಪಡಿಸಿದರು.

55,62,000/- ರೂ. ಉಳಿತಾಯ : ಮಹಾಮಸ್ತಕಾಭಿಷೇಕದ ಲೆಕ್ಕಪತ್ರದ ಸವಿವರ ಮಾಹಿತಿ ನೀಡಿದ ಕೋಶಾಧಿಕಾರಿ ಪಿ. ಜಯರಾಜ ಕಂಬಳಿ, ಎಲ್ಲಾ ವೆಚ್ಚಗಳು ಕಳೆದು 55,62,000 ರೂ. ಉಳಿಕೆಯಾಗಿದ್ದು ಇದನ್ನು ಬ್ಯಾಂಕಿನಲ್ಲಿ ನಿರಖು ಠೇವಣಿ ಇಡಲಾಗಿದೆ ಎಂದು ತಿಳಿಸಿದರು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ನೇತೃತ್ವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಕಾಲಿಕ ಸಹಕಾರದಿಂದ ಮಸ್ತಕಾಭಿಷೇಕ ಯಶಸ್ವಿಯಾಗಿ ನಡೆದಿದೆ ಎಂದರು.


ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ ಶೆಟ್ಟಿ, ಹಾ.ಮಾ.ನಾ. ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಡಾ. ಎಸ್.ಡಿ. ಶೆಟ್ಟಿ ಮತ್ತು ಮುನಿರಾಜ ರೆಂಜಾಳ ಸಂಪಾದಕರಾಗಿದ್ದು ಪ್ರಕಟಿಸಿದ “ಸಿರಿ ಬಾಹುಬಲಿ” ಸ್ಮರಣಸಂಚಿಕೆಯನ್ನು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಡಾ. ಎ. ಜಯಕುಮಾರ ಶೆಟ್ಟಿ ಉಪಸ್ಥಿತರಿದ್ದರು.


ಮಸ್ತಕಾಭಿಷೇಕ ಮಹೋತ್ಸವಕ್ಕೆ ವಿಶೇಷ ಸಹಕಾರ ಮತ್ತು ನೆರವು ನೀಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಂ.ಆರ್.ಪಿ.ಎಲ್. ನ ಎಂಜಿನಿಯರ್ ಸ್ವಾಮಿಪ್ರಸಾದ್, ಸ್ಮರಣಸಂಚಿಕೆ ಸಂಪಾದಕ ಡಾ. ಎ. ಜಯಕುಮಾರ ಶೆಟ್ಟಿ, ಅಟ್ಟಳಿಗೆ ನಿರ್ಮಾಣ ಮಾಡಿದ ಮಾಣಿಯ ಪದ್ಮಪ್ರಸಾದ್ ಮತ್ತು ಮಹಾವೀರ ಪ್ರಸಾದ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ತಿಮ್ಮಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ ಮಹಾಮಸ್ತಕಾಭಿಷೇಕ ಸರ್ವರ ಸಹಕಾರದಿಂದ ಯಶಸ್ವಿಯಾಗಿ ನಡೆದಿದ್ದು ಇದರಿಂದಾಗಿ ಜೈನರ ಬಗ್ಯೆ ಎಲ್ಲಾ ಸಮಾಜಬಾಂಧವರಿಗೆ ವಿಶೇಷ ಗೌರವ, ಅಭಿಮಾನ ಮೂಡಿಬಂದಿದೆ.


ವೇಣೂರಿನ ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ವತಿಯಿಂದ ಸರ್ವರ ಸಹಕಾರದೊಂದಗೆ ಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ ಬಗ್ಯೆ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮ ನಿರ್ವಹಿಸಿದ ಮಹಾವೀರ ಜೈನ್ ಮೂಡುಕೋಡಿಗುತ್ತು ಕೊನೆಯಲ್ಲಿ ಧನ್ಯವಾದವಿತ್ತರು.

Related posts

ಕನ್ಯಾಡಿ ಸೇವಾಭಾರತಿಯಿಂದ ದೀಪಾವಳಿ ಸ್ನೇಹ ಮಿಲನ – 2025

Suddi Udaya

ಗುರುವಾಯನಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷರಾಗಿ ಸತ್ಯಪಾಲನ್ ನಾಯರ್, ಕಾರ್ಯದರ್ಶಿಯಾಗಿ ಮಾನ್ಯ ಆಯ್ಕೆ

Suddi Udaya

ವಶಕ್ಕೆ ಪಡೆಯಲಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಬಂಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮುಂಡಾಜೆ ಮಂಜುಶ್ರೀ ಭಜನಾ ಮಂಡಳಿಗೆ ಆರ್ಥಿಕ ನೆರವು

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಗಣಪತಿ ಗುಡಿಯ ಹಾಗೂ ಪಿಲಿಚಂಡಿ ದೈವದ ದಾರಂದ ಮುಹೂರ್ತ

Suddi Udaya

ಮೇ 20-22: ಸಾಲುಕಾಯೇರು ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya
error: Content is protected !!