ಗರ್ಡಾಡಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸತ್ಯ ಶೋಧಕ ವೇದಿಕೆಯಿಂದ ಜೂ. 8 ರಂದು ಗರ್ಡಾಡಿ ಗ್ರಾಮದ ಹಚ್ಚಾಡಿ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ, ಅಂಗನವಾಡಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷ ಸುಕೇಶ್ ಮಾಲಾಡಿ ಮಾತಾಡಿ, ನಮ್ಮ ಮುಂದಿನ ಬದುಕಿಗಾಗಿ ನಾವು ಪರಿಸರವನ್ನು ಸಂರಕ್ಷಣೆ ಮಾಡಲೇಬೇಕಾಗಿದೆ. ಹಸಿರೇ ಉಸಿರು, ಉಸಿರಿಗಾಗಿ ಪರಿಸರ ಎನ್ನುವಂತೆ ಸತ್ಯ ಶೋಧಕದ ಆಶಯಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಕೂಡ ಒಂದು. ಪರಿಸರದ ಕಾಳಜಿ ಸಣ್ಣ ಮಕ್ಕಳಿಂದಲೇ ಆರಂಭವಾಗಬೇಕು ಎಂದು ಸಣ್ಣ ಮಕ್ಕಳನ್ನೇ ಆಯ್ಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹಚ್ಚಾಡಿ ಅಂಗನವಾಡಿ ಕೇಂದ್ರಕ್ಕೆ ತಮ್ಮ ತಂಡದಿಂದಾಗುವ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಹಚ್ಚಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಗುಲಾಬಿ ರವರು ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಅಂಗನವಾಡಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸತ್ಯ ಶೋಧಕ ತಂಡಕ್ಕೆ ಧನ್ಯವಾದ ಸಲ್ಲಿಸಿದರು.
ವೇದಿಕೆಯಲ್ಲಿ ಪುಟಾಣಿ ವಂಶಿಕಾ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪರಿಸರದಲ್ಲಿ ಮಕ್ಕಳಿಂದ ಹಾಗೂ ಪೋಷಕರಿಂದ ಗಿಡ ನೆಡಿಸಲಾಯಿತು. ಗಿರೀಶ್ ಪಣಕಜೆ ಸ್ವಾಗತಿಸಿ, ಬಾಬಿ ಮಡಂತ್ಯಾರು ವಂದಿಸಿದರು.