September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕಾರ್ಯಾಗಾರ

ಉಜಿರೆ: ಯುವಕರ ಆಸಕ್ತಿಗೆ ಅನುಗುಣವಾದ ಉದ್ಯೋಗಾವಕಾಶಗಳ ಲಭ್ಯತೆ ಮತ್ತು ಸದ್ಬಳಕೆಯಿಂದ ಭಾರತವು ವಿವಿಧ ರಂಗಗಳಲ್ಲಿ ವಿಶ್ವಮಟ್ಟದ ಸ್ಪರ್ಧೆಯನ್ನೊಡ್ಡಿ ಮುಂಚೂಣಿ ಸ್ಥಾನ ಗಳಿಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಬಿ.ಸಿ. ಟ್ರಸ್ಟ್ ಸಿ.ಇ.ಒ. ಅನಿಲ್ ಕುಮಾರ್ ಎಸ್.ಎಸ್‌. ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಬೆಂಗಳೂರಿನ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ರಿಲಯನ್ಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿತ ಮೂರು ದಿನಗಳ ವೃತ್ತಿಪರ ತರಬೇತಿ ಕಾರ್ಯಾಗಾರವನ್ನು ಜೂ. 9ರಂದು ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೆ ಹೆಚ್ಚು ಸೃಜನಶೀಲತೆಯೊಂದಿಗೆ ತೊಡಗಿಸಿಕೊಳ್ಳಬಲ್ಲರು. ಸಮರ್ಪಣೆ ಭಾವದೊಂದಿಗೆ ಕಾರ್ಯನಿರ್ವಹಿಸಬಲ್ಲರು. ಇದರಿಂದ ನವೀನ ಆವಿಷ್ಕಾರ ಸಾಧ್ಯವಾಗುತ್ತದೆ. ಗುಣಮಟ್ಟದ ಉದ್ಯಮಶೀಲತೆ ರೂಢಿಯಾಗುತ್ತದೆ. ಈ ಮೂಲಕ ಜಾಗತಿಕ ಸ್ಪರ್ಧೆಗೆ ಬೇಕಾದ ಸಾಮರ್ಥ್ಯ ರೂಢಿಯಾಗುತ್ತದೆ ಎಂದರು.

ಮುಖ್ಯ ಅತಿಥಿ, ಮ್ಯಾಜಿಕ್ ಬಸ್ ಫೌಂಡೇಶನ್ ಎಂಸಿಎಸ್‌ಆರ್ ಪ್ರಾಜೆಕ್ಟ್ ಮ್ಯಾನೇಜರ್ ಧವನ್‌ ಗೌಡ ಮಾತನಾಡಿದರು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರಲ್ಲಿನ ವ್ಯಾವಹಾರಿಕ ಕೌಶಲ್ಯ ಹಾಗೂ ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿಗೆ ಒತ್ತು ನೀಡುವುದು ಬಹಳ ಅಗತ್ಯವಾಗಿದೆ. ಸಮಾಜಕಾರ್ಯ ವೃತ್ತಿಯು ನೇರವಾಗಿ ಜನರ ಜೊತೆ ಸಂಪರ್ಕ ಹೊಂದಿರುವ ಕ್ಷೇತ್ರ.  ವಿದ್ಯಾರ್ಥಿಗಳು ಉತ್ತಮ ಗ್ರಹಿಸುವಿಕೆ, ಸಂವೇದನೆ, ಸ್ಪಷ್ಟ ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ ಗುಣ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವುದು ಬಹು ಅಗತ್ಯವಾಗಿದೆ ಎಂದರು. 


ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕ ಜ್ಞಾನವಷ್ಟೇ ಮುಖ್ಯವಲ್ಲ. ಆತ್ಮವಿಶ್ವಾಸ ಹಾಗೂ ನಿರ್ಧಾರ ತೆಗೆದುಕೊಳ್ಳುವ ಧೈರ್ಯವು ವ್ಯಕ್ತಿತ್ವದ ಅವಿಭಾಜ್ಯ ಅಂಶಗಳು. ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಾಗಾರಗಳಿಂದ ಈ ಆತ್ಮವಿಶ್ವಾಸ, ಧೈರ್ಯ ಸಾಧ್ಯವಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್‌ ಕೆ.ಆರ್., ಪ್ರಾಧ್ಯಾಪಕರಾದ ಡಾ. ಅತುಲ್ ಎಸ್. ಸೆಮಿತ್, ಸ್ವಾತಿ  ಬಿ., ಡಾ. ದಾನೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ಕಲ್ಮಂಜ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Suddi Udaya

ಧರ್ಮಸ್ಥಳ: ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಆರೋಪಿ ಕಿಲ್ಲೂರು ನಿವಾಸಿ ಮೊಹಮ್ಮದ್ ಕೈಫ್ ತಮಿಳುನಾಡಿನಲ್ಲಿ ಬಂಧನ

Suddi Udaya

ಮಿತ್ತಬಾಗಿಲು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿಶೇಷ ತರಗತಿ ಕಾರ್ಯಕ್ರಮದ ಉದ್ಘಾಟನೆ

Suddi Udaya

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

Suddi Udaya
error: Content is protected !!