22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ ‘ಪ್ರತಿಭಾ ಸಮ್ಮಾನ್-2025’

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರೋವರ್ಸ್‌-ರೇಂಜರ್ಸ್‌ ದಳದ ವತಿಯಿಂದ 2024-25 ರ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದಳದ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ‘ಪ್ರತಿಭಾ ಸಮ್ಮಾನ್‌-2025ʼ ಜೂ.27 ರಂದು ನಡೆಯಿತು.

ವಾಣಿಜ್ಯ ವಿಭಾಗದಲ್ಲಿ 591 ಅಂಕಗಳೊಂದಿಗೆ ಶೇ. 98.5. ಅಂಕ ಗಳಿಸಿ ರಾಜ್ಯಕ್ಕೆ 9 ನೇ ಸ್ಥಾನ ಪಡೆದ ರೇಂಜರ್‌ ಅನನ್ಯಾ ಮತ್ತು 541 ಅಂಕಗಳೊಂದಿಗೆ ಶೇ. 90.16 ಅಂಕ ಪಡೆದ ರೋವರ್‌ ಪರೀಕ್ಷಿತ್‌ ಜೈನ್‌ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಮುಖ್ಯ ಅತಿಥಿ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ರಾಜ್ಯ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್‌ ಕೆ., ರೋವರ್ಸ್‌ ಮತ್ತು ರೇಂಜರ್ಸ್‌ ಶಿಕ್ಷಣದಿಂದ ಜೀವನಕ್ಕೆ ಒಂದು ಶಿಸ್ತುಬದ್ಧ ಚೌಕಟ್ಟು ದೊರೆಯುತ್ತದೆ. ರೋವರ್ಸ್‌-ರೇಂಜರ್ಸ್‌ ಚಟುವಟಿಕೆಗಳು ಪಠ್ಯ ಶಿಕ್ಷಣದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುದಕ್ಕೆ ಈ ಇಬ್ಬರು ಸಾಧಕರೇ ಉದಾಹರಣೆ ಎಂದರು.


“ಈ ಸಾಧಕ ವಿದ್ಯಾರ್ಥಿಗಳ ಸಾಧನೆ ಬಹಳಷ್ಟು ಜನಕ್ಕೆ ಪ್ರೇರಣೆ ಆಗಿ ಮುಂದಿನ ವರ್ಷ ಇನ್ನೂ ಹೆಚ್ಚು ವಿದ್ಯಾರ್ಥಿಗಳನ್ನು ರೋವರ್ಸ್‌ & ರೇಂಜರ್ಸ್‌ ದಳದಿಂದ ಸನ್ಮಾನಿಸುವಂತೆ ಆಗಲಿ” ಎಂದರು.
ರೋವರ್ಸ್‌-ರೇಂಜರ್ಸ್‌ ಶಿಕ್ಷಣವು ಜೀವನಕ್ಕೆ ಬೇಕಾದ ಎಲ್ಲಾ ರೀತಿಯ ಕೌಶಲ್ಯ ನೀಡುತ್ತದೆ. ಯಾವುದೇ ಪರಿಸ್ಥಿತಿ ಇರಲಿ, ಸನ್ನಿವೇಶ ಹೇಗೇ ಇರಲಿ ನಾವು ಹೇಗೆ ವರ್ತಿಸಬೇಕು, ಹೇಗೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ರೋವರ್ಸ್‌-ರೇಂಜರ್ಸ್‌ ಶಿಕ್ಷಣ ಕಲಿಸುತ್ತದೆ. ಆದರೆ ನಾವು ಅದರ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಅದರ ತಿರುಳನ್ನು ನಾವು ಅನುಭವಿಸಬಹುದು. ನಮ್ಮ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳಿಂದಲೂ ಸಹ ಬಹಳ ಜೀವನಾನುಭವವನ್ನು ಕಲಿಯಬಹುದು. ಅದರಿಂದ ಸಾಧನೆಗೆ ಇನ್ನಷ್ಟು ಸಹಕಾರಿ ಆಗುತ್ತದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲಿಯೂ ಹೇಗೆ ತಮ್ಮನ್ನು ತಾವು ಸಕ್ತಿಯವಾಗಿ ತೊಡಗಿಸಿ ಸಾಧಿಸಿಬಹುದು ಎಂಬುದನ್ನು ಈ ಇರ್ವರು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ ಎಂದು ನುಡಿದು ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.


ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ ಬಿ. ಮಾತನಾಡಿ, “ಸಿಕ್ಕ ಅವಕಾಶಗಳನ್ನು ಹೇಗೆ ಸದ್ಬಳಕೆ ಮಾಡಿಕೊಂಡು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲಿಯೂ ವಿಶೇಷ ಸಾಧನೆಗೈಯಬಹುದು ಎಂಬುದನ್ನು ಈ ಎರಡೂ ಪ್ರತಿಭೆಗಳು ತೋರಿಸಿದ್ದಾರೆ. ಇವರ ಈ ಸಾಧನೆ ಇನ್ನುಳಿದವರಿಗೂ ಮಾದರಿ ಆಗಿದೆ” ಎಂದರು.
ಸನ್ಮಾನಿತರಾದ ಅನನ್ಯಾ ಮತ್ತು ಪರೀಕ್ಷಿತ್ ಜೈನ್‌ ಮಾತನಾಡಿ, ಕಾಲೇಜಿನ ರೋವರ್ಸ್‌ & ರೇಂಜರ್ಸ್‌ ದಳದಲ್ಲಿ ಪಡೆದ ಶಿಕ್ಷಣ, ಶಿಸ್ತು, ಸಮಯಪಾಲನೆ ತಮ್ಮ ಶೈಕ್ಷಣಿಕ ಸಾಧನೆಗೂ ನೆರವಾಯಿತು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರಮೋದ್‌ ಕುಮಾರ್‌ ಬಿ., ಅವಕಾಶ ಎಲ್ಲರಿಗೂ ಇರುತ್ತದೆ, ಆದರೆ ಕೆಲವರು ಮಾತ್ರ ಅದರನ್ನು ಸಾಧನೆಯನ್ನಾಗಿ ಪರಿವರ್ತಿಸಿ ಮಾದರಿಯಾಗುತ್ತಾರೆ ಎಂಬುದಕ್ಕೆ ಈ ವಿದ್ಯಾರ್ಥಿಗಳು ನಿದರ್ಶನ ಎಂದರು.

ಕೊಠಡಿಯೊಳಗಿನ ಶಿಕ್ಷಣ ಕೇವಲ ಕೆಲವು ಅಂಕಗಳನ್ನು ಕೊಟ್ಟರೆ ಸ್ಕೌಟ್‌ ಮತ್ತು ಗೈಡ್ಸ್‌ ನಂತಹ ಶಿಕ್ಷಣಗಳು ಅಂಕಗಳೊಟ್ಟಿಗೆ ಕೌಶಲ, ಜೀವನ ಶಿಕ್ಷಣ, ಸ್ವಾವಲಂಬಿ ಜೀವನಗಳನ್ನು ಕಲಿಸುತ್ತದೆ. ಆದ್ದರಿಂದ ಕಲಿಕೆಯೊಟ್ಟಿಗೆ ಇಂತಹ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಾಗ ಸಾಧಿಸುವ ಮಾರ್ಗ ಸುಲಭವಾಗುತ್ತದೆ ಎಂದು ನುಡಿದು ಮುಂದಿನ ಜೀವನಕ್ಕೆ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಕಾಲೇಜು ಮತ್ತು ರೋವರ್ಸ್‌ & ರೇಂಜರ್ಸ್‌ ದಳದ ಪರವಾಗಿ ಭರತ್ ರಾಜ್‌ ಕೆ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ರೋವರ್ಸ್‌ ಮತ್ತು ರೇಂಜರ್ಸ್‌ ದಳನಾಯಕರಾದ ಲಕ್ಷ್ಮೀಶ್‌ ಭಟ್‌ ಮತ್ತು ಅಂಕಿತಾ ಎಂ.ಕೆ. ಉಪಸ್ಥಿತರಿದ್ದರು.

ರೋವರ್‌ ಪವನ್‌ ಬಿ ಪಿ ಸ್ವಾಗತಿಸಿದರು. ರೇಂಜರ್‌ ದೀಕ್ಷಿತಾ ವಂದಿಸಿದರು. ರೇಂಜರ್‌ ತನ್ವಿ ಸಾಧಕರನ್ನು ಪರಿಚಯಿಸಿದರು. ರೋವರ್‌ ಮೊಹಮ್ಮದ್‌ ತೌಸಿಫ್ ಕಾರ್ಯಕ್ರಮ ನಿರ್ವಹಿಸಿದರು.

Related posts

ನಡ ಸ. ಪ್ರೌ.ಶಾಲೆಯಲ್ಲಿ ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆ

Suddi Udaya

ಬೆಳ್ತಂಗಡಿ: ನಗರ ಬ್ಲಾಕ್ ಕಾಂಗ್ರೆಸ್‌ನ ವೀಕ್ಷಕರಾಗಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಅಲಿ ನೇಮಕ

Suddi Udaya

ಮೊಬೈಲ್ ಹಿಂದಿರುಗಿಸಿಕೊಟ್ಟು ಮಾನವೀಯತೆ ಮೆರೆದ ಬೆಳ್ತಂಗಡಿ ಸಂತೆಕಟ್ಟೆ ಗಣೇಶ್ ಮೆಡಿಕಲ್ ಮಾಲೀಕ

Suddi Udaya

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮುಂಡೂರುನಲ್ಲಿ ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 4ನೇ ನೂತನ ಮುಂಡೂರು ಶಾಖೆಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬಂಗಾಡಿ ಬಿಎಸ್ಎನ್ಎಲ್ ನೆಟ್ವರ್ಕ್ಸ್ ಸಮಸ್ಯೆಯಿಂದ ಗ್ರಾಹಕರು ಕಂಗಾಲು: ಸಂಬಂಧ ಪಟ್ಟವರು ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya
error: Content is protected !!