
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಎಸ್.ಐ.ಟಿ ತಂಡ ಆ.8 ರಂದು ಶುಕ್ರವಾರ ಧಮ೯ಸ್ಥಳ ಗ್ರಾಮದ ಬೊಳಿಯಾರ್ ಎಂಬಲ್ಲಿ 15 ನೇ ಸ್ಥಳದಲ್ಲಿ ಶವದ ಅವಶೇಷಗಳ ಶೋಧ ಕಾರ್ಯವನ್ನು ನಡೆಸಿದ್ದು, ಶವದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳ ಗ್ರಾಮದ ಬೊಳಿಯಾರ್ ಸಮೀಪಕ್ಕೆ ಆ.8 ರಂದು ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ತಂಡ ಆಗಮಿಸಿದೆ. ಕಳೆದ ಎರಡು ವಾರಗಳಿಂದ ನೇತ್ರಾವತಿ ಸ್ನಾನಘಟ್ಟದ ಸಮೀಪ ದೂರು ದಾರ ತೋರಿಸಿದ ಜಾಗದಲ್ಲಿ ಅಗೆಯುವ ಪ್ರಕ್ರಿಯೆ ನಡೆಸಲಾಗಿತ್ತು. ಆ.8ರಂದು ನೇತ್ರಾವತಿ ಸ್ನಾನ ಘಟ್ಟದ ಬಳಿ ಡ್ಯಾಮನ ಬಳಿಯ 13ನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸಬಹುದೆಂದು ನಿರೀಕ್ಷಿಸಲಾಗಿತ್ತು.
ಆದರೆ ಇಂದು ಬೆಳಿಗ್ಗೆ ದೂರುದಾರನ ಜೊತೆ ಎಸ್ ಐಟಿ ತಂಡ ಮಧ್ಯಾಹ್ನದ ಸಮಯ ಧರ್ಮಸ್ಥಳ ಬಳಿಯ ಬೋಳಿಯಾರ್ ಎಂಬಲ್ಲಿಗೆ ಬಂದಿದ್ದು, ಅಲ್ಲಿ ಕಾಡಿನೊಳಗೆ ದೂರುದಾರನ ಜೊತೆ ತೆರಳಿ ಅಲ್ಲಿ ಅನಾಮಿಕ ದೂರುದಾರ ಗುರುತಿಸಿದ ಸ್ಥಳದಲ್ಲಿ ಯಾವುದೇ ಶವದ ಕಳೆಬರಹಗಳು ಪತ್ತೆಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಎಸ್ಐಟಿ ತಂಡ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಹಿಂದಿರುಗಿದೆ.







