30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯಲ್ಲಿ “ಧರ್ಮ ವಿಜಯ ಸಮಾವೇಶ”ದ ಸಿದ್ಧತೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ: ಸೆ.5 ಕ್ಕೆ ಧರ್ಮಸ್ಥಳದಲ್ಲಿ ಉಭಯ ಜಿಲ್ಲಾ ಧರ್ಮಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ

ಬೆಳ್ತಂಗಡಿ: ಧರ್ಮ ನಿಂದನೆ, ಕೋಟ್ಯಾಂತರ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಚಾರ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಮತ್ತು ಅವರ ಕುಟುಂಬವರ್ಗದವರ ಮೇಲೆ ವಿನಾಕಾರಣ ಆರೋಪ ಎಸಗುತ್ತಿರುವ ಶಕ್ತಿಗಳ ಷಡ್ಯಂತ್ರವನ್ನು ಮಟ್ಟ ಹಾಕಿ ಅದಕ್ಕೆ ಕಾರಣಕರ್ತರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ ಮೊದಲ ವಾರದಲ್ಲಿ ತಾಲೂಕಿನಲ್ಲಿ ಬೃಹತ್ “ಧರ್ಮ ವಿಜಯ ಸಮಾವೇಶ” ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು.
ಆ.25 ರಂದು ಬೆಳ್ತಂಗಡಿ ಪಿನಾಕಿ ಸಭಾಂಗಣದಲ್ಲಿ ಸೇರಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಹಾಗೂ ಹೆಗ್ಗಡೆಯವರ ಅಭಿಮಾನಿಗಳ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಹೋರಾಟ ಸಮಿತಿ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಪೂರನ್ ಯಶೋವರ್ಮ, ಉಜಿರೆಯ ಉದ್ಯಮಿ ರಾಜೇಶ ಪೈ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಇವರು ಮಾಹಿತಿ ನೀಡಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.
ಸಮಾವೇಶ ಸ್ಥಳ, ದಿನಾಂಕ ಹಾಗೂ ರೂಪುರೇಷೆಗಳ‌ ಬಗ್ಗೆ ಮುಂದಿನ‌ ದಿನಗಳಲ್ಲಿ ಅದಕ್ಕಾಗಿ ರಚಿಸಿದ ಸಂಚಾಲನಾ ಸಮಿತಿ ಅಂತಿಮ ಮಾಹಿತಿ ನೀಡಲಿದೆ. ಅದಕ್ಕಾಗಿ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕಿನ 19 ವಲಯಗಳಿಂದ ಓರ್ವೊರ್ವ ಸಹ ಸಂಚಾಲಕರುಗಳನ್ನು ಆರಿಸಿ ಸಮಿತಿ ಅಂತಿಮಗೊಳಿಸಲಾಯಿತು. ಅತೀ ಗಣ್ಯರನ್ನು ಒಳಗೊಂಡ ಕೋರ್ ಕಮಿಟಿಯನ್ನೂ ರಚಿಸಲಾಯಿತು.


ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ಸೇರಿದಂತೆ ಹತ್ತು ಹಲವು ಕ್ಷೇತ್ರದ ಗಣ್ಯರುಗಳು ಉಪಸ್ಥಿತರಿದ್ದರು. ಡಾ. ಎಂ.ಪಿ ಶ್ರೀನಾಥ್ ಸ್ವಾಗತಿಸಿದರು.ಕೃಷಿ ಅಧಿಕಾರಿ ರಾಮ್ ಕುಮಾರ್‌ ವಂದಿಸಿದರು.

ಸೆ.5 ಕ್ಕೆ ಧರ್ಮಸ್ಥಳದಲ್ಲಿ ಉಡುಪಿ -ದ.ಕ ಜಿಲ್ಲಾ ಮಟ್ಟದ ಧಾರ್ಮಿಕ ಸಂಸ್ಥೆಗಳ ಮುಕ್ತೇಸರರ ಬೃಹತ್ ಸಮಾವೇಶ

ಸೆ.5 ರಂದು ಅವಿಭಜಿತ ದ.ಕ ಜಿಲ್ಲಾ ಎಲ್ಲಾ ಧರ್ಮ ಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ ಧರ್ಮಸ್ಥಳದಲ್ಲಿ ನಡೆಸಲಾಗುವುದು ಎಂದು ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ ಕುಮಾರ್ ನಡಕರ ಮತ್ತು ಪೂರನ್ ಯಶೋವರ್ಮ ಪ್ರಕಟಿಸಿದರು.
ಡಾ. ಮೋಹನ ಆಳ್ವ ಅವರ ಮುಂದಾಳತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಸರಕಾರಿ ನೊಂದಾಯಿತ 1300 ರಷ್ಟು ದೇವಸ್ಥಾನ, ಸ್ವತಂತ್ರ ಆಡಳಿತ ದಲ್ಲಿರುವ ದೇವಸ್ಥಾನಗಳು ಹಾಗೂ ದೈವಸ್ಥಾನ, ಬಸದಿ ಇತ್ಯಾಧಿ ಸೇರಿ ಒಟ್ಟು 3 ಸಾವಿರ ದಷ್ಟು ಶ್ರದ್ಧಾ ಕೇಂದ್ರಗಳ ಮುಕ್ತೇಸರರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಧರ್ಮಸ್ಥಳದ‌ ಅಮೃತವರ್ಷಿಣಿ ಸಭಾಂಗಣದಲ್ಲಿ ಸುಮಾರು 5 ಸಾವಿರ ಮಂದಿ ಸೇರುವ ಬಗ್ಗೆ ಸಿದ್ಧತೆ ನಡೆಸಲಾಗಿದೆ. ಧರ್ಮಕ್ಷೇತ್ರಗಳ‌ ಮೇಲಿನ ಅಪಪ್ರಚಾರದ ಬಗ್ಗೆ ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ‌ಇದು ಧಾರ್ಮಿಕ ಕ್ಷೇತ್ರಗಳ ಮುಖ್ಯಸ್ಥರೇ ಇಷ್ಟೊಂದು ಪ್ರಮಾಣದಲ್ಲಿ ಜಮಾಯಿಸುವ ಮೊದಲ ಸಭೆಯೂ ಆಗಿದೆ ಎಂದರು.
ಆರಂಭದಲ್ಲಿ ಸೇರುವ ಮುಖ್ಯಸ್ಥರುಗಳು ಧರ್ಮಸ್ಥಳ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಆಯ್ದ 100 ಮಂದಿ ಗಣ್ಯರು ವೇದಿಕೆಯಲ್ಲಿರುತ್ತಾರೆ. ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಈ ಸಭೆಯಲ್ಲಿ ಸಂದೇಶ ನೀಡಲಿದ್ದಾರೆ ಎಂದರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್: ನೂತನ ನಗರ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ ನೇಮಕ

Suddi Udaya

ಕಾಜೂರು ಉರೂಸ್; ಪ್ರತಿದಿನ‌‌ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ

Suddi Udaya

ಮಂಗಳೂರು ಸಂಸದ ಬ್ರಿಜೇಶ್ ಚೌಟ ರವರ ಮನವಿಯನ್ನು ಪರಿಗಣಿಸಿ ದೆಹಲಿಯಲ್ಲಿ JBF ಪೆಟ್ರೋಕೆಮಿಕಲ್ಸ್‌ ಮತ್ತು GAIL ನ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ

Suddi Udaya

ಬೆಳ್ತಂಗಡಿ ಪಿ ಎಂ ಶ್ರೀ ಮಾದರಿ ಶಾಲೆಗೆ ನಾರಾಯಣ ಬೇಗೂರು ಭೇಟಿ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ

Suddi Udaya

ಕೊಕ್ಕಡ ಸ.ಪ. ಪೂ. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ದೀಪಾವಳಿಗೆ ಝಗಮಗಿಸಿದ ವೇಣೂರು

Suddi Udaya
error: Content is protected !!