ಬೆಳ್ತಂಗಡಿ: ಗ್ರಾಮ ಪಂಚಾಯತಿ ಕಲಿಕಾ ಕೇಂದ್ರಗಳ ಯಶೋಗಾಥೆಗಳ ದಾಖಲೀಕರಣ ತರಬೇತಿಯು ಡಿ.2-3ರಂದು ಜರುಗಿದ್ದು ಬೆಳ್ತಂಗಡಿ ತಾಲೂಕಿನಿಂದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ, ಮಡಂತ್ಯಾರು ಪಂಚಾಯತ್ ನ ಅಧ್ಯಕ್ಷೆ ರೂಪ ಎಸ್, ಪಿಡಿಓ ಶ್ರೀನಿವಾಸ್ ರವರು ಭಾಗವಹಿಸುತ್ತಾರೆ.
ಭಾರತ ಸರ್ಕಾರದ ಪಂಚಾಯತ್ ರಾಜ್ ಸೂಚನೆಯಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 173 ಗ್ರಾಮ ಪಂಚಾಯಿತಿಗಳನ್ನು ‘ಪಂಚಾಯಿತಿ ಕಲಿಕಾ ಕೇಂದ್ರ” (Panchayat Learning Centre – PLC) ಗಳನ್ನು ಗುರುತಿಸಿದ್ದು, ಈ ಪಂಚಾಯಿತಿ ಕಲಿಕಾ ಕೇಂದ್ರಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಉತ್ತಮ ಕಾರ್ಯಕ್ಷಮತೆ ಕಲಿಕೆಯ ಅವಕಾಶ ಕಲ್ಪಿಸುವುದು ಇಲ್ಲಿನ ಪ್ರಮುಖ ಆಶಯವಾಗಿದೆ. ಈಗಾಗಲೇ ತಮ್ಮ ಜಿಲ್ಲೆಯಲ್ಲಿ ತಮ್ಮ ಶಿಫಾರಸ್ಸಿನಂತೆ ಈಗಾಗಲೇ ಉತ್ತಮ ಕೆಲಸ ನಿರ್ವಹಣೆ ಮಾಡಿರುವ, ಪಂಚಾಯತ್ ರಾಜ್ ಆಶಯಕ್ಕೆ ಅನುಗುಣವಾಗಿ ವಿನೂತನ ಚಟುವಟಿಕೆಗಳನ್ನು ಕೈಗೊಂಡಿರುವ ಗ್ರಾಮ ಪಂಚಾಯಿತಿಗಳನ್ನು ಪಂಚಾಯಿತಿ ಕಲಿಕಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈ ಪಂಚಾಯಿತಿ ಕಲಿಕಾ ಕೇಂದ್ರಗಳಲ್ಲಿ ತರಬೇತಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ.
ಪ್ರಸ್ತುತ ಈ ಪಂಚಾಯಿತಿ ಕಲಿಕಾ ಕೇಂದ್ರಗಳಲ್ಲಿ ಆಗಿರುವ ವಿನೂತನ ವಿಶಿಷ್ಟ ಕಾರ್ಯಚಟುವಟಿಕೆಗಳ ಯಶೋಗಾಥೆಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಪಂಚಾಯಿತಿ ಕಲಿಕಾ ಕೇಂದ್ರಗಳನ್ನು ಕುರಿತು ವಿಷಯ ಪರಿಚಯ ಮಾಡುವುದು ಮತ್ತು ಯಶೋಗಾಥೆಗಳು ದಾಖಲೀಕರಣ ಮಾಡುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.











