ಉಜಿರೆ: ಪ್ರಯಾಣದಲ್ಲಿ, ವಾಹನಗಳಲ್ಲಿ ಸಂಚರಿಸುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಪಘಾತವಾದಾಗ ಸಾರ್ವಜನಿಕರು ತಕ್ಷಣ ಸ್ಪಂದಿಸಿ ಸೂಕ್ತ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಅರಿವು, ಜಾಗೃತಿ ಹೊಂದಿರಬೇಕು ಎಂದು ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿಶೋರ್ಚಂದ್ರ ಹೆಗ್ಡೆ ಹೇಳಿದರು.

ಅವರು ಜ 2ರಂದು ಉಜಿರೆ ಅರಳಿಯಲ್ಲಿರುವ ರೋಟರಿ ಸಭಾಭವನದಲ್ಲಿ ಇಂಡಿಯನ್ ರೆಡ್ಕ್ರಾಸ್ ಮತ್ತು ಬೆಳ್ತಂಗಡಿ ರೋಟರಿಕ್ಲಬ್ ಆಶ್ರಯದಲ್ಲಿ ಪೊಲೀಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತರು ಮತ್ತು ಜೂನಿಯರ್ ರೆಡ್ಕ್ರಾಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರಿನ ರೆಡ್ಕ್ರಾಸ್ ಶತಮಾನೋತ್ಸವ ಸ್ಮಾರಕ ಕಟ್ಟಡ ಪೂರ್ಣಗೊಂಡಿದ್ದು ಅಲ್ಲಿ ಮುಂದೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಬಂಟ್ವಾಳದಲ್ಲಿ ಸದ್ಯದಲ್ಲೆ ಹೊಸ ರೆಡ್ಕ್ರಾಸ್ ಘಟಕ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ರೆಡ್ಕ್ರಾಸ್ ವಿದ್ಯಾರ್ಥಿಗಳು ಸಾದರಪಡಿಸಿದ ಸ್ಕಿಟ್ ವಿಶೇಷ ಪ್ರಶಂಸೆಗೆ ಪಾತ್ರವಾಯಿತು.
ಇಂಡಿಯನ್ ರೆಡ್ಕ್ರಾಸ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಹರಿದಾಸ ಮಾತನಾಡಿ, ಮಾನವೀಯತೆಯ ನೆಲೆಯಲ್ಲಿ ರೆಡ್ಕ್ರಾಸ್ ಸೇವೆ ಮಾಡುತ್ತದೆ ಎಂದು ಹೇಳಿದರು.
ಗುರುದತ್ ಎಂ. ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಪಿ. ಪ್ರಕಾಶ್ ಪ್ರಭು ಮತ್ತು ಕಾರ್ಯದರ್ಶಿ ಡಾ. ಎಂ.ಎಂ ದಯಾಕರ್ ಉಪಸ್ಥಿತರಿದ್ದರು.
ಸಚೇತ್ ಸುವರ್ಣ ಮತ್ತು ನಿತ್ಯಶ್ರೀ ಬಿ.ವಿ. ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಕಾರ್ಯಕ್ರಮ ನಡೆಸಿದರು. ಯಶವಂತ ಪಟವರ್ಧನ್ ಸ್ವಾಗತಿಸಿದರು. ಪ್ರಮೋದ್ ಆರ್. ನಾಯಕ್ ಧನ್ಯವಾದವಿತ್ತರು.











