ಪಡಂಗಡಿ: ಮನೆಯಲ್ಲಿ ಯಾರು ಇಲ್ಲದ ಸಮಯ ಒಳನುಗ್ಗಿದ ಕಳ್ಳರು ಸುಮಾರು ರೂ.9.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಜ.6ರಂದು ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿದೆ.
ಪಡಂಗಡಿ ಗ್ರಾಮದ ಬದ್ಯಾರು ಐಬಿ ರೆಸಿಡೆನ್ಸಿ ನಿವಾಸಿ ಇಸ್ಮಾಯಿಲ್ ಎಂಬವರು ಮನೆಯಲ್ಲಿ ಈ ಕಳ್ಳತನ ನಡೆದಿದೆ. ಜ.6ರಂದು ರಾತ್ರಿ 7 ಗಂಟೆಗೆ ಇಸ್ಮಾಯಿಲ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಮೂಡಬಿದ್ರೆಗೆ ಕಾರ್ಯಕ್ರಮಕ್ಕೆ ಹೋದವರು ಮರಳಿ ರಾತ್ರಿ 11.50ಕ್ಕೆ ವಾಪಾಸ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಇಸ್ಮಾಯಿಲ್ ಅವರು ಮೂಡಬಿದ್ರೆಗೆ ಹೋಗಿರುವುದನ್ನು ತಿಳಿದ ಯಾರೋ ಕಳ್ಳರು ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿದ್ದ ಕಪಾಟಿನ ಬೀಗ ಮುರಿದು ಕಪಾಟಿನಲ್ಲಿರಿಸಿದ್ದ 24 ಗ್ರಾಂ ತೂಕದ 2 ಚಿನ್ನದ ಬಳೆ, 20ಗ್ರಾಂ ತೂಕದ ಚಿನ್ನದ ಮುತ್ತಿನ ಹಾರ, ೪ಗ್ರಾಂ ತೂಕದ ಬ್ರಾಸ್ಲೈಟ್-1, ಮೂರು ಗ್ರಾಂ ತೂಕದ 2 ಉಂಗುರ, ಒಂದೂವರೆ ಗ್ರಾಂ 1 ಉಂಗುರ, 4 ಗ್ರಾಂ ತೂಕದ ಕಿವಿಯ ಓಲೆ ಸೇರಿದಂತೆ ಒಟ್ಟು 83.5 ಗ್ರಾಂ ತೂಕದ ಚಿನ್ನಭಾರಣ ಕಳವುಗೈದಿದ್ದು, ಇದರ ಮೌಲ್ಯ 9,50,೦೦೦ ಎಂದು ಅಂದಾಜಿಸಲಾಗಿದೆ. ಜೊತೆಗೆ ಕಪಾಟಿನಲ್ಲಿದ್ದ ರೂ.25,೦೦೦ ನಗದು ಹಣ ಕಳವು ಮಾಡಿವುದಾಗಿ ವರದಿಯಾಗಿದೆ.











