22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’: ಮೂರು ದಶಕಗಳ ವೃತ್ತಿ ಬದುಕಿಗೆ ಗೌರವದ ಬೀಳ್ಕೊಡುಗೆ

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸುಮಾರು 33 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಿರುವ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರನ್ನು ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಬಳಗ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ಗೌರವಿಸುವ ‘ಭಾಸ್ಕರ ಪರ್ವ’ ಕಾರ್ಯಕ್ರಮವು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಅಭೂತಪೂರ್ವವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದರು. ಬಳಿಕ ಮಾತನಾಡಿ, ಶಿಕ್ಷಕರು ತನ್ನ ವೃತ್ತಿ ಬದುಕಿನಲ್ಲಿ ನಾಲ್ಕು ಗುಣಗಳಿಂದ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಶಿಕ್ಷಕರು ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು, ಎರಡನೇಯದು ಬೋಧನಾ ವಿಷಯವನ್ನು ವಿಶೇಷವಾಗಿ ಪ್ರೀತಿಸಬೇಕು, ನಂತರ ವೃತ್ತಿಯನ್ನು ಪ್ರೀತಿಸಬೇಕು ಬಳಿಕ ತಾನಿರುವ ಸಂಸ್ಥೆಯನ್ನು ಗೌರವದಿಂದ ಕಾಣಬೇಕು. ಇದಕ್ಕೆಲ್ಲ ಮಾದರಿಯಾಗಿ ಹಲವಾರು ಸವಾಲಿನ ಸಂದರ್ಭದಿಂದ ಈ ದಿನದ ವರೆಗೂ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಮುಖ್ಯಸ್ಥರಾಗಿ ನಡೆಸಿಕೊಂಡು ಬಂದ ಭಾಸ್ಕರ್ ಹೆಗಡೆಯವರು ಕಾಣುತ್ತಾರೆ. ತನ್ನ ವೃತ್ತಿ ಬದುಕಿನಲ್ಲಿ ನಿರಂತರವಾಗಿ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಯನ್ನು ಹರಸುತ್ತಾ ಬಂದು, ರಾಜ್ಯದುದ್ದಕ್ಕೂ ತನ್ನ ಶಿಷ್ಯ ಪರಂಪರೆಯನ್ನು ಹಂಚುತ್ತಾ ಬಂದಿದ್ದಾರೆ. ರಾಜ್ಯದ ಹೆಸರಾಂತ ಪತ್ರೀಕಾ ಕಛೇರಿಗಳಲ್ಲಿ ಬಹುತೇಕ ಎಸ್.ಡಿ.ಎಂ ಸಂಸ್ಥೆಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೇ ತುಂಬಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಶುಭ ಹಾರೈಸಿದರು.

ಡಾ. ಭಾಸ್ಕರ್ ಹೆಗಡೆಯವರ ಬದುಕಿನ ಸಾಕ್ಷ್ಯಚಿತ್ರವನ್ನು ವಿಭಾಗದ ಹಿರಿಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಇವರು, ಗುರುಗಳು ಸದಾ ವಿದ್ಯಾರ್ಥಿಗಳ ಯಶಸ್ಸನ್ನ ಬಯಸುತ್ತಾರೆ. ಅದಕ್ಕಾಗಿ ವಿದ್ಯಾರ್ಥಿಗಳ ಪ್ರತೀ ಚಟುವಟಿಕೆಗಳಲ್ಲಿ ಪ್ರೋತ್ಸಾಹ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಿರುತ್ತಾರೆ. ಅಂತಹ ಮಹಾ ಸೇವೆಯನ್ನು ಎಸ್.ಡಿ.ಎಂ ಸಂಸ್ಥೆಯಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಸಮಯವನ್ನು ವಿನಿಯೋಗಿಸಿದ ಶ್ರೇಯಸ್ಸು ಭಾಸ್ಕರ್ ಹೆಗಡೆಯವರಿಗೆ ಸಲ್ಲುತ್ತದೆ. ಪತ್ರಿಕೋದ್ಯಮದಲ್ಲಿ ನೂರಾರು ಜನ ಬದುಕನ್ನು ಕಟ್ಟಿಕೊಳ್ಳಲು ಈ ಸಂಸ್ಥೆ ಹಾಗು ವಿಭಾಗ ಕಾರಣೀಭೂತವಾಗಿ ಅದರಲ್ಲಿ ಭಾಸ್ಕರ್ ಹೆಗಡೆಯವರ ಪಾತ್ರ ಬಹು ಮಹತ್ವದ್ದು. ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಂಡ ವಿದ್ಯಾರ್ಥಿಗಳು ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳಗುತ್ತಿದ್ದಾರೆ. ಎಂದು ತನ್ನ ವಿದ್ಯಾ ದಿನಗಳ ಪ್ರಾಯೋಗಿಕ ಚಟುವಟಿಕೆಗಳಾದ ಚಿಗುರು, ಕಾರ್ಯಯೋಜನೆ, ಶೈಕ್ಷಣಿಕ ಪ್ರವಾಸ ಇತ್ಯಾದಿ ಸಂದರ್ಭಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಡಾ. ಭಾಸ್ಕರ್ ಹೆಗಡೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಸತೀಶ್ಚಂದ್ರ ಎಸ್. ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದರು. ಬಳಿಕ ಡಾ. ಭಾಸ್ಕರ್ ಹೆಗಡೆ ಚಿಗುರು ಮತ್ತು ಕದಂಬ ಮ್ಯಾಗಜಿನ್ ಗಳನ್ನು ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಮಾರು 30 ನಿಮಿಷಗಳ ಡಾ. ಭಾಸ್ಕರ್ ಹೆಗಡೆ ವೃತ್ತಿ ಜೀವನದ ಸಾಕ್ಷ್ಯ ಚಿತ್ರವನ್ನು ಪ್ರದರ್ಶೀಸಲಾಯಿತು. ಅಂತಾರಾಷ್ಟ್ರೀಯ ಸ್ಪೀಡ್ ಚಿತ್ರ ಪೈಟಂರ್ ವಿಲಾಸ್ ನಾಯಕ್ ಬಿಡಿಸಿದ ಭಾವಚಿತ್ರದ ಫೋಟೋವನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಒಬ್ಬ ಶಿಕ್ಷಕನಾದವನು ವಿದ್ಯಾರ್ಥಿಗಳ ಪದವಿಗೆ ಮಾತ್ರ ಶಿಕ್ಷಣವನ್ನು ನೀಡಬಾರದು. ಆತ ತರಗತಿಯ ಶಿಕ್ಷಣದ ಜೊತೆಗೆ ಬದುಕಿನ ಭವಿಷ್ಯದ ಶಿಕ್ಷಣವನ್ನೂ ನೀಡಬೇಕು. ಪಠ್ಯ ಜ್ಞಾನದ ಜೊತೆಗೆ ನೌತಿಕ ಮೌಲ್ಯ, ಸಂಸ್ಕಾರದ ಗುಣವನ್ನು ಬೆಳೆಸಬೇಕು. ಇಂತಹ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಶಿಕ್ಷಣವನ್ನು 30 ಕ್ಕೂ ಅಧಿಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಧಾರೆಯೆರದ ಹೆಮ್ಮೆ ಭಾಸ್ಕರ್ ಹೆಗಡೆಯವರದು. ಅವರ ಮಾರ್ಗದರ್ಶನದಲ್ಲಿ ಸಾಗಿಬಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಅತ್ಯಂತ ವಿಶೇಷವಾಗಿ ಗುರುತಿಸಿಕೊಂಡಿದೆ ಎಂದು. ನಿವೃತ್ತ ಬದುಕಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮ, ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಸೇರಿದಂತೆ ಎಸ್.ಡಿ.ಎಂ ನ ವಿವಿಧ ಕಾಲೇಜುಗಳ ಪ್ರಾಂಶುಪಾರು, ಮುಖ್ಯಸ್ಥರು, ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಸತೀಶ್ ಕುಮಾರ್ ಅಂಡಿಂಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಗುರುಪ್ರಸಾದ್ ನಿರೂಪಿಸಿ, ಹಿರಿಯ ವಿದ್ಯಾರ್ಥಿನಿ ಸಹನಾ ವಂದಿಸಿದರು.

Related posts

ನಾರಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ರೂ. 9.5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Suddi Udaya

ಗೇರುಕಟ್ಟೆ ಮೆದಿನದಲ್ಲಿ ‘ಸುಧನ್ವ ಮೋಕ್ಷ’ ತಾಳಮದ್ದಳೆ

Suddi Udaya

ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮುಳಿಯ ಜುವೆಲ್ಲರ್ಸ್ ವತಿಯಿಂದ ವನಮಹೋತ್ಸವ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಛಾಲಯ ಅಭಿಯಾನ

Suddi Udaya

ಗೇರು ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಶಿಲನ್ಯಾಸ

Suddi Udaya

ಧರ್ಮಸ್ಥಳದಲ್ಲಿ ಯಾತ್ರಾರ್ಥಿಯ ಬ್ಯಾಗ್‌ನಲ್ಲಿದ್ದ ನಗದು ಸಹಿತ ರೂ.2 ಲಕ್ಷ ಸೊತ್ತು ಕಳವು: ದೇವರ ದರ್ಶನಕ್ಕೆ ಹೋಗಿದ್ದಾಗ ಕಾರಿನ ಗಾಜು ಒಡೆದು ಕೃತ್ಯ

Suddi Udaya
error: Content is protected !!