ಬೆಳ್ತಂಗಡಿ: ಬಿಪಿಎಲ್ ಪಡಿತರ ಚೀಟಿ ವಿತರಿಸಲು ಈಗಲೂ ವಾರ್ಷಿಕ 1.20 ಲಕ್ಷ ರೂ. ಆದಾಯವನ್ನು ಮಾನದಂಡವಾಗಿ ಅನುಸರಿಸುತ್ತಿರುವುದು ಸರಿಯಲ್ಲ. ಬಿಪಿಎಲ್ ಕಾರ್ಡ್ ಪಡೆಯಲು ಈಗಲೂ 9 ವರ್ಷಗಳ ಹಳೆಯ ಮಾನದಂಡವನ್ನೇ ಬಳಸಲಾಗುತ್ತಿದೆ. ಆದ್ದರಿಂದ, ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು 1.20 ಲಕ್ಷದಿಂದ ಕನಿಷ್ಠ 3 ಲಕ್ಷ ರೂ. ಗೆ ಏರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಆಗ್ರಹಿಸಿದ್ದಾರೆ.
ಅವರು ವಿಧಾನಪರಿಷತ್ ನಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ವಿಚಾರವನ್ನು ಪ್ರಸ್ತಾವಿಸಿದರು.
ಬಿ.ಪಿ.ಎಲ್. ನ.ಮಾನದಂಡವನ್ನು ಬದಲಿಸುವ ತುರ್ತು ಅಗತ್ಯವಿದ್ದು, ನಿಜವಾದ ಫಲಾನುಭವಿಗಳಿಗೆ ಸವಲತ್ತು ತಲುಪಬೇಕಿದೆ. ಯಾವುದೇ ಯೋಜನೆಗಳ ಮಾನದಂಡವಾಗಲಿ ಕಾಲಕಾಲಕ್ಕೆ ಅವನ್ನು ಪರಾಮರ್ಶಿಸಿ, ಸೂಕ್ತ ಮಾರ್ಪಾಟು ಮಾಡುವುದು ಅತ್ಯಗತ್ಯ. ಬಿಪಿಎಲ್ ಕಾರ್ಡ್ ವಿಷಯದಲ್ಲಿ ಸಾಕಷ್ಟು ಗೊಂದಲಗಳಿದ್ದು, ಸೂಕ್ತ ನಿಯಮಗಳನ್ನು ರೂಪಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚ ಸತತವಾಗಿ ಹೆಚ್ಚುತ್ತಲೇ ಸಾಗಿದೆ. ಈಗಿನ ಬೆಲೆ ಏರಿಕೆಯ ಕಾಲದಲ್ಲಿ ವಾರ್ಷಿಕ 1.20 ಲಕ್ಷ ರೂ. ಆದಾಯ ಎನ್ನುವುದು ತೀರಾ ಕಡಿಮೆ. ಸಾಮಾನ್ಯ ಕೂಲಿ ಕಾರ್ಮಿಕರ ದಿನದ ಕೂಲಿ 500-600 ರೂ. ಇದ್ದರೂ ಅವರ ವಾರ್ಷಿಕ ಆದಾಯ ಈ ಮಿತಿಯನ್ನು ಮೀರುತ್ತದೆ. ಇದರಿಂದ ನಿಜವಾದ ಬಡವರಿಗೂ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಹಾಗಾಗಿಯೇ. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು 1.20 ಲಕ್ಷದಿಂದ ಕನಿಷ್ಠ 3 ಲಕ್ಷ ರೂ. ಗೆ ಏರಿಸಬೇಕು ಎಂಬ ಆಗ್ರಹ ಸೂಕ್ತವಾಗಿದೆ.
ಅಲ್ಲದೆ ಇತ್ತೀಚೆಗೆ ಸರ್ಕಾರವು ಐಟಿ ಪಾವತಿದಾರರು, ಸರ್ಕಾರಿ ನೌಕರರು ಮತ್ತು 7.5 ಎಕರೆಗಿಂತ ಹೆಚ್ಚು ಜಮೀನು ಇರುವವರ ಕಾರ್ಡ್ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳಿಂದಾಗಿ ಬಡವರ ಕಾರ್ಡ್ಗಳು ಸಹ ಅಕಾರಣವಾಗಿ ರದ್ದಾಗುತ್ತಿವೆ ಎಂಬ ಆರೋಪವಿದ್ದು, ಬಡವರಿಗೆ ಅನ್ಯಾಯವಾಗದಂತೆ ಪಾರದರ್ಶಕ ಪ್ರಕ್ರಿಯೆ ನಡೆಸಬೇಕು. ಸರ್ಕಾರ ಈಗಾಗಲೇ 12 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ‘ಅನರ್ಹ’ ಎಂದು ಗುರುತಿಸಿದೆ. ಈ ಪೈಕಿ ಈಗಾಗಲೇ ಲಕ್ಷಾಂತರ ಕಾರ್ಡ್ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಹೊಸ ಬಿಪಿಎಲ್ ಕಾರ್ಡ್ಗಾಗಿ 3.22 ಲಕ್ಷಕ್ಕೂ ಅಧಿಕ ಅರ್ಜಿಗಳು ವಿಲೇವಾರಿಗೆ ಇನ್ನೂ ಬಾಕಿ ಇವೆ.
ಆದುದರಿಂದ, ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡಗಳನ್ನು ಕೂಡಲೇ ಪರಾಮರ್ಶಿಸಿ, ಪ್ರಸ್ತುತ ಇರುವ ಆದಾಯ ಮಿತಿಯನ್ನು ವಾಸ್ತವ ನೆಲೆಗಟ್ಟಿನ ಆಧಾರದಲ್ಲಿ ಗಣನೀಯವಾಗಿ ಏರಿಸುವುದು, ಬಡವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಪಾರದರ್ಶಕ ಪ್ರಕ್ರಿಯೆ ನಡೆಸುವುದು ಹಾಗೂ ಹೊಸ ಬಿಪಿಎಲ್ ಕಾರ್ಡ್ಗಾಗಿ ಬಾಕಿ ಇರುವ 3.22 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಗತ್ಯ ಹಾಗೂ ಸೂಕ್ತ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.












