26.1 C
ಪುತ್ತೂರು, ಬೆಳ್ತಂಗಡಿ
August 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ ಕಾಲೇಜು: ಸಾಧಕರ ದಿನ-229 ವಿದ್ಯಾರ್ಥಿ ಸಾಧಕರಿಗೆ ಪ್ರಶಸ್ತಿ ಪತ್ರ ವಿತರಣೆ

ಉಜಿರೆ: ಬದುಕಿಗೆ ಅನ್ವಯವಾಗದ ಅನಾವಶ್ಯಕ ಸಂಗತಿಗಳನ್ನು ನಿರ್ಲಕ್ಷಿಸಿ ಸಾಧನೆಯ ಹಾದಿ ಕ್ರಮಿಸುವ ಗುರಿಕೇಂದ್ರಿತ ನಿರಂತರ ಪ್ರಯತ್ನ ಯಶಸ್ಸನ್ನು ನಿಖರಗೊಳಿಸುತ್ತದೆ ಎಂದು ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಶ್ರಾವ್ಯ ಎಸ್.ಕುಮಾರ್ ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಮಂಗಳವಾರ ಆಯೋಜಿತವಾದ ‘ಸಾಧಕರ ದಿನ’ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.

ಶೈಕ್ಷಣಿಕ ಹಂತಗಳಲ್ಲಿ ಅಧ್ಯಯನ ನಿರತರಾಗಿದ್ದಾಗಲೇ ವಿವಿಧ ಕ್ಷೇತ್ರಗಳು ನಿರೀಕ್ಷಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಭದ್ರ ಅಡಿಪಾಯ ರೂಪುಗೊಳ್ಳುತ್ತಿರುತ್ತದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ಪರ್ಧಾತ್ಮಕ ಜಗತ್ತನ್ನು ಎದುರುಗೊಳ್ಳಲು ವಿದ್ಯಾರ್ಥಿಗಳು ಸನ್ನದ್ಧಗೊಳ್ಳಬೇಕು ಎಂದರು.

ಉನ್ನತ ಹುದ್ದೆ ಅಥವಾ ಸಾಧನೆಯ ಉತ್ತುಂಗ ತಲುಪುವಾಗ ಸಹನೆಯ ಮನೋಧರ್ಮ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಫಲವಾದರೆ ಮತ್ತೆ ಪ್ರಯತ್ನಿಸಿ ಗೆಲ್ಲುವ ಆತ್ಮವಿಶ್ವಾಸವು ಸಹನೆ ಕಾಯ್ದುಕೊಳ್ಳಲು ನೆರವಾಗುತ್ತದೆ. ಶಿಸ್ತು ಇಲ್ಲದಿದ್ದರೆ ಯಾವ ಪ್ರಯತ್ನವೂ ಸಾಫಲ್ಯತೆಯ ಸಾಧ್ಯತೆಗಳನ್ನು ವಿಸ್ತರಿಸುವುದಿಲ್ಲ. ವೈಫಲ್ಯದ ಕಾರಣಗಳನ್ನು ನಿಖರವಾಗಿ ಪತ್ತೆ ಹಚ್ಚಿ ಮುನ್ನುಗ್ಗುವ ಹಂಬಲ ಯಶಸ್ಸಿನ ಗಮ್ಯ ತಲುಪಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಕಠಿಣ ಶ್ರಮವು ಯಶಸ್ಸನ್ನು ನಿಖರಗೊಳಿಸುತ್ತದೆ ಅದೃಷ್ಟವು ಅಂಥ ಯಶಸ್ಸನ್ನು ಹಿಂಬಾಲಿಸುತ್ತದೆ. ಇದನ್ನು ಸ್ಪಷ್ಟಪಡಿಸಿಕೊಂಡು ವಿದ್ಯಾರ್ಥಿಗಳು ಯೋಚಿಸಬೇಕು. ಕಾಲೇಜಿನಲ್ಲಿ ಶೈಕ್ಷಣಿಕ ಸಾಮರ್ಥ್ಯ ಮತ್ತು ಪ್ರತಿಭೆ ನಿರೂಪಿಸಲು ಲಭ್ಯವಾಗುವ ಎಲ್ಲಾ ಅವಕಾಶಗಳನ್ನು ಪೂರಕವಾಗಿಸಿಕೊಳ್ಳುವ ಬದ್ಧತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವೈಯಕ್ತಿಕ ಮತ್ತು ತಂಡಗಳ ವಿಭಾಗಗಳ ೨೨೯ ವಿದ್ಯಾರ್ಥಿ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ಮಾತನಾಡಿದರು. ಭವಿಷ್ಯದಲ್ಲಿ ಎದುರಾಗುಬಹುದಾದ ಸಂದಿಗ್ಧತೆಗಳನ್ನು ನಿಖರವಾಗಿ ಊಹಿಸಿ ಪರಿಹಾರಾತ್ಮಕ ಹೆಜ್ಜೆಗಳನ್ನಿರಿಸುವ ಸೂಕ್ಷö್ಮ ಗ್ರಹಿಕೆ ಮತ್ತು ಕಾರ್ಯನಿರ್ವಹಣೆಯ ವೈಖರಿಯ ಮೂಲಕ ಉಳಿದವರಿಗಿಂತ ವ್ಯಕ್ತಿತ್ವವನ್ನು ವಿಭಿನ್ನವಾಗಿಸಿಕೊಳ್ಳಬಹುದು. ಇದರಿಂದಾಗಿ ನಾಯಕತ್ವದ ವಿನೂತನ ಕೌಶಲ್ಯದ ಮಾದರಿಗಳನ್ನು ರೂಢಿಸಿಕೊಳ್ಳಬಹುದು ಎಂದರು.

ಎಸ್.ಡಿ.ಎಂ ಕಾಲೇಜಿನ ಅಕ್ಯಾಡೆಮಿಕ್ ಕೋಆರ್ಡಿನೇಟರ್ ಎಸ್.ಎನ್.ಕಾಕತ್ಕರ್, ವಿದ್ಯಾರ್ಥಿ ಪ್ರತಿನಿಧಿಗಳಾದ ವರುಣ್, ಮಾಧವ ದಾಸ್, ಪವಿತ್ರ, ಪ್ರಕೃತಿ ಸಿಂಚನ ಉಪಸ್ಥಿತರಿದ್ದರು. ಅನ್ವಿತಾ ಸೆರಾ, ಧರಿತ್ರಿ ಭಿಡೆ ಕಾರ್ಯಕ್ರಮ ನಿರೂಪಿಸಿದರು. ಚಂದನ್ ನಿರೂಪಿಸಿದರು.

Related posts

ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಮಡಂತ್ಯಾರು: ಬಟ್ಟೆ ಕಸೂತಿ ತಯಾರಿಕೆಯ ಆರಿ ವರ್ಕ್ ತರಬೇತಿಯ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ, ದುರ್ಗಾಪೂಜೆ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು: ವೈಯಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ

Suddi Udaya

ಶ್ರೀಕರ ಭಟ್ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ ರವರಿಗೆ  ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ

Suddi Udaya

ಇಂದಬೆಟ್ಟು : ಕಜೆಯಲ್ಲಿ ನಿಧಿಗಾಗಿ ಶೋಧ ಕಾರ್ಯ

Suddi Udaya
error: Content is protected !!