ವೇಣೂರು: ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಭರತನಾಟ್ಯ ಕಲೆ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಿಯತಿ ನೃತ್ಯ ನಿಕೇತನ ವತಿಯಿಂದ ಭರತನಾಟ್ಯ ತರಗತಿಗೆ ಮಾ.19ರಂದು ಚಾಲನೆ ನೀಡಲಾಯಿತು.
ವೇಣೂರು ಜೆ.ಪಿ ಟವರ್ಸ್ನಲ್ಲಿ ನಡೆದ ಈ ಕಾರ್ಯಕ್ರಮವು ಗುರುವರ್ಯರ ಆಶೀರ್ವಾದದೊಂದಿಗೆ ಶುಭಾರಂಭಗೊಂಡಿತು. ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಮಾರ್ಗದರ್ಶನದಲ್ಲಿ ವಿದುಷಿ ನಿಶಾ ಪ್ರಸಾದ್ ಮಾಣೂರು ಇವರ ನೇತೃತ್ವದಲ್ಲಿ ಆರಂಭವಾದ ಈ ತರಗತಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕರು, ಭರತನಾಟ್ಯವು ಕೇವಲ ನೃತ್ಯವಲ್ಲದೆ, ಅದು ಭಾವ, ರಾಗ, ತಾಳಗಳ ಸಮನ್ವಯವಾಗಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು. ಪೋಷಕರು ಮತ್ತು ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಉಪಕ್ರಮವನ್ನು ಶ್ಲಾಘಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲೆಗಳ ತರಗತಿಗಳು ಪ್ರಾರಂಭವಾಗುತ್ತಿರುವುದು ಸಂಸ್ಕೃತಿ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಜೆಪಿ ಟವರ್ ನ ಮಾಲೀಕರಾದ ಜಗದೀಶ್ಚಂದ್ರ ಡಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.

ವಿದುಷಿ ನಿಶಾ ಪ್ರಸಾದ್ ಮಾಣೂರು ಇವರ ನೇತೃತ್ವದಲ್ಲಿ ನಿಯತಿ ನೃತ್ಯ ನಿಕೇತನದ ಶಾಖೆಯು ವೇಣೂರಿನಲ್ಲಿ ಉದ್ಘಾಟನೆಗೊಂಡು , ಶಂಕರ್ ಭಟ್ ಇವರ ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಯತಿ ಭಟ್ ಇವರು ಪ್ರಾರ್ಥಿಸಿ ಪ್ರಸಾದ್ ಎಮ್ ಕೆ ಇವರು ಧನ್ಯವಾದವನ್ನು ಸಮರ್ಪಿಸಿದರು. ಪೋಷಕರಾದ ಜಯಂತಿ ಭಟ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು












