ಬೆಳ್ತಂಗಡಿ: ಡಾ. ಅಖಿಲ ತೇಜಸ್ವಿ ಆರ್. ಅವರು ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ “ಫ್ರೇಮ್ವರ್ಕ್ ಆನ್ ಅಕ್ಸೆಲೆರೇಟಿಂಗ್ ಇಮೇಜ್ ಅನಾಲಿಸಿಸ್ ಥ್ರೂ ಡೀಪ್ ಲರ್ನಿಂಗ್ ಆಂಡ್ ನಾಲೆಜ್ ರೆಲಿಗೇಷನ್ ಯೂಸಿಂಗ್ ಗ್ರಾಫ್ ಡೇಟಾ ಸೈನ್ಸ್” (“Framework on Accelerating Image Analysis Through Deep Learning and Knowledge Relegation using Graph Data Science”) ಎಂಬ ಸಂಶೋಧನಾ ಪ್ರಬಂಧವನ್ನು ಬೆಳ್ಳಿಪಾಡಿ ಡಾ. ಶಮಂತ್ ರೈ ಅವರ ಮಾರ್ಗದರ್ಶನದಲ್ಲಿ ಮಂಡಿಸಿ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ತಮ್ಮ B.E. ಪದವಿಯನ್ನು ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪೂರೈಸಿದ್ದು, ನಂತರ ನಿಟ್ಟೆಯ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯದಿಂದ (NMAMIT) ಗಣಕ ವಿಜ್ಞಾನ ವಿಭಾಗದಲ್ಲಿ ಎಂ.ಟೆಕ್ (M.Tech) ಪದವಿಯನ್ನು ಅತ್ಯುತ್ತಮ ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸುತ್ತಾರೆ.
ಡಾ. ಅಖಿಲಾ ತೇಜಸ್ವಿ ಆರ್. ಅವರು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ (Information Science and Engineering) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಇವರು ಒಟ್ಟು 17 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿದ್ದಾರೆ.
ಇವರ ಅನೇಕ ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ (Journals) ಪ್ರಕಟಗೊಂಡಿವೆ. ಅಲ್ಲದೆ, ಇವರು 3 ಭಾರತೀಯ ಪೇಟೆಂಟ್ಗಳನ್ನು (Indian Patents) ಸಹ ಪಡೆದಿದ್ದಾರೆ. ಇತ್ತೀಚೆಗೆ ನಡೆದ IEEE PhD Research Scholars Colloquium – 2025 ರಲ್ಲಿ ಇವರಿಗೆ ‘ಅತ್ಯುತ್ತಮ ಪ್ರಬಂಧ ಮಂಡನೆ’ (Best Presentation) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ. ಅಖಿಲಾ ತೇಜಸ್ವಿ ಆರ್. ಇವರು ನಾಡೇಲು ದಿ| ರವಿ ಪೂಜಾರಿ ಹಾಗೂ ಕುಸುಮಾವತಿ ದಂಪತಿಯ ಸುಪುತ್ರಿ. ಹಾಗೂ ಬೆಳ್ತಂಗಡಿ ತಾಲೂಕು ಪಾಡಿಪಿಲ್ಯ ಶರತ್ ಕುಮಾರ್ ಎ, ಅವರ ಧರ್ಮಪತ್ನಿ. ಅಖಿಲ ಅವರಿಗೆ ಕು|ಗ್ಯಾನ್ವಿ, ಕು| ಐಶಿನಿ ಎಂಬ ಇಬ್ಬರು ಮಕ್ಕಳಿದ್ದಾರೆ.












