ರಾಷ್ಟ್ರಮಟ್ಟದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೊಸ ಮೈಲುಗಲ್ಲು ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ನ ಆಶ್ರಯದಲ್ಲಿ ಎಳೆಯ ಮನಸ್ಸುಗಳನ್ನು ಒಗ್ಗೂಡಿಸುವ ‘ಕ್ರಿಯೇಟಿವ್ ಚಿಲಿಪಿಲಿ-2026’ ಮೂರು ದಿನಗಳ ಬೇಸಿಗೆ ಶಿಬಿರವು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್ .ಎಲ್. ರವರು, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪಾಠ ಪ್ರವಚನಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ಕಲಿಯಬೇಕು. ಮಕ್ಕಳು ತಮ್ಮ ಸುಂದರ ಬಾಲ್ಯವನ್ನು ಮೊಬೈಲ್ ನಿಂದ ದೂರವಿದ್ದು ತಮ್ಮ ಬದುಕನ್ನು ಸವಿಯಬೇಕೆಂಬ ಸದಾಶಯವನ್ನಿಟ್ಟುಕೊಂಡು ಈ ಚಿಲಿಪಿಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಮಾತ್ರವಲ್ಲದೆ ಕ್ರಿಯೇಟಿವ್ ಸಂಸ್ಥೆಯ ಹೊಸ ಪರಿಕಲ್ಪನೆಯಾದ ಎಳೆಯ ಮನಸ್ಸುಗಳಿಗೆ ಮುಂದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಲು ಮತ್ತು ನಮ್ಮ ಸಂಸ್ಕೃತಿ, ದೇಶಾಭಿಮಾನವನ್ನು ಹೊಂದಲು ಕ್ರಿಯೇಟಿವ್ ಗ್ಲೋಬಲ್ ಸ್ಕೂಲನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಮೊದಲ ಹೆಜ್ಜೆಯಾಗಿ ಇಂದು ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ನುಡಿದರು.

ಸಹ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ ಮಾತನಾಡಿ ಇಂದು ಒತ್ತಡ ಅನ್ನುವುದು ಕೇವಲ ಪಿಯುಸಿ ಮಕ್ಕಳಿಗೆ ಮಾತ್ರವಲ್ಲ, ಬಾಲ್ಯದಲ್ಲಿಯೇ ಪ್ರಾರಂಭವಾಗುತ್ತದೆ. ಇಂತಹ ಒತ್ತಡಗಳಿಂದ ಹೊರಬಂದು ತಮ್ಮ ಅಮೂಲ್ಯ ಸಮಯವನ್ನು ಸುಂದರವಾಗಿ ಕಳೆಯುವ ನಿಟ್ಟಿನಲ್ಲಿ ಈ ಶಿಬಿರವು ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಈ ಶಿಬಿರವು ಒಳ್ಳೆಯ ಕಾರ್ಯಕ್ರಮ ಎಂದು ನುಡಿದರು.
ಸಹ ಸಂಸ್ಥಾಪಕ ಅಮೃತ್ ರೈ ಯು.ಮಕ್ಕಳ ಬಾಲ್ಯದಲ್ಲಿ ಅಗತ್ಯವಿರುವ ಅನುಭವಗಳನ್ನು ಪೂರೈಸಿದರೆ ಮುಂದಿನ ಹಂತದಲ್ಲಿ ಪಶ್ಚಾತಾಪ ಪಡುವ ಅಗತ್ಯವಿಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಶಿಬಿರವು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಹ ಸಂಸ್ಥಾಪಕ ಆದರ್ಶ ಎಂ. ಕೆ. ಚಿತ್ತಾರ ಸಂಸ್ಥೆಯ ಮುಖ್ಯಸ್ಥ ಸುಜೇಂದ್ರ ಕಾರ್ಕಳ, ಕ್ರಿಯೇಟಿವ್ ಗ್ಲೋಬಲ್ ಸ್ಕೂಲಿನ PRO ಪ್ರಜ್ಞಾ ಉಪಸ್ಥಿತರಿದ್ದರು.
ಕ್ರಿಯೇಟಿವ್ ಗ್ಲೋಬಲ್ ಸ್ಕೂಲಿನ ಪ್ರಾಂಶುಪಾಲೆ ಅಕ್ಷತಾ ಶೆಣೈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಸುಮಾರು 85ಕ್ಕೂ ಅಧಿಕ ಮಕ್ಕಳು, ಪೋಷಕರು ಭಾಗವಹಿಸಿದ್ದರು. ವಿವಿಧ ಮನೋರಂಜನೆ ಚಟುವಟಿಕೆಗಳು, ಜಾದು ಪ್ರದರ್ಶನ ನಡೆಯಿತು.












