24 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಕಡಬಾಗಿಲು ಸೇತುವೆ ನಿರ್ಮಾಣಕ್ಕೆ ಮತ್ತೆ ವಿಘ್ನು : ಸದ್ಯಕಿಲ್ಲ ಕಾಮಗಾರಿ ಭಾಗ್ಯ…

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡು , ಶಂಕುಸ್ಥಾಪನೆಯಾದರೂ , ಕಾಮಗಾರಿಗೆ ಬ್ರೇಕ್ ಬಿದ್ದಿದ್ದು , ಸದ್ಯ ಕಾಮಗಾರಿ ನಿಲ್ಲಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಭಿವೃದ್ಧಿಗಾಗಿ ಜನರ ನಿರಂತರ ಮೂರು ದಶಕಗಳ ಹೋರಾಟ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷ ಕಳೆದರೂ ಇಂದಿಗೂ ಇಲ್ಲಿ ವಿದ್ಯುತ್ , ಸರಿಯಾದ ರಸ್ತೆ ಇಲ್ಲದಿರುವುದು ವ್ಯವಸ್ಥೆಯ ಜಡ್ಡುತನಕ್ಕೆ , ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿ ಸುಮಾರು ಆದಿವಾಸಿ ಮಲೆಕುಡಿಯ ಸಮುದಾಯದ 45 ಕ್ಕೂ ಹೆಚ್ಚು ಕುಟುಂಬಗಳು ಎರಡು ಶತಮಾನಗಳಿಂದ ಕೃಷಿ ಕೃತಾವಳಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದೆ. ಆದರೆ ಈಗಲೂ ಅದೇ ಚಿಮಿಣಿ ದೀಪದ ಜೀವನ , ಅದೇ ಪಕ್ಕಾ ಮಣ್ಣಿನ ರಸ್ತೆ. ಇದೇ ಅವರ ಜೀವನ ಎಂಬಂತಾಗಿದೆ.

ಇಲ್ಲಿ 80 ದಶಕದಲ್ಲಿ ಕಾಡಬಾಗಿಲು ಎಂಬಲ್ಲಿ ಸೇತುವೆಯೊಂದನ್ನು ಮಾಜಿ ಶಾಸಕ ಗಂಗಾಧರ ಗೌಡ ರವರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಗಾಳಿ, ಮಳೆ , ಚಳಿ , ಬಿಸಿಲಿಗೆ ಮೈಯೊಡ್ಡಿಕೊಂಡಿದ್ದ ಈ ಸೇತುವೆ 40 ವರ್ಷಗಳ ನಂತರ ತನ್ನ ಸೇವೆಯನ್ನು ಕೊನೆಗೊಳಿಸಿ ಬಿದ್ದು ಮಲಗಿದಲ್ಲೇ ಆಯಿತು. ಕಾಡಿನ ಮಕ್ಕಳ ಸಂಪರ್ಕ ಸೇತುವೆ ಏಕಾಏಕಿ ಮುರಿದು ಬಿತ್ತು. ಕಾಡಿನ ಸಂಪರ್ಕ ಶಾಶ್ವತವಾಗಿ ಕಸಿದುಕೊಂಡಿತು.

4 ವರ್ಷದ ನಂತರ…
ಕಾಡಿನ ಮಕ್ಕಳ ಸಂಪರ್ಕ ಕೊಂಡಿಯಾಗಿದ್ದ ಏಕೈಕ ಸೇತುವೆ ನಿರ್ಮಾಣಕ್ಕಾಗಿ ಜನರು ಮತ್ತೆ ಬೀದಿಗಿಳಿದು , ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿಗಾಗಿ 1.90 ಲಕ್ಷಕ್ಕೆ ಆರ್ಥಿಕ ಅನುಮೋದನೆ ನೀಡಿತು. ಮೊದಲ ಹಂತವಾಗಿ ಸೇತುವೆ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿತು. ಶಾಸಕ ಹರೀಶ್ ಪೂಂಜಾರವರು ಇತ್ತೀಚೆಗೆ ರಸ್ತೆ , ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಆದರೆ ಇಲಾಖೆಗಳ ಮಾಹಿತಿ ಪ್ರಕಾರ 1.90 ಕೋಟಿಯಲ್ಲಿ ಪ್ರಥಮ ಹಂತದಲ್ಲಿ ರೂ. 50 ಬಿಡುಗಡೆ ಗೊಂಡಿದೆ.

ಕಾಮಗಾರಿಗೆ ಬ್ರೇಕ್:
ಮಾರ್ಚ್ 7 ರಂದು ಇಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ , ಕಾಮಗಾರಿಗೆ ಮುಂದಡಿ ಹಾಕಿದರೆ , ಇತ್ತ ಕಾಮಗಾರಿಗೆ ಕಾನೂನಿನ ಉರುಳು ಬಿತ್ತು. ಕಾಡಬಾಗಿಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕಾಗಿದೆ. ಇದಾದ ಬಳಿಕ ಅರಣ್ಯ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಅನುಮತಿ ಪಡೆಯಬೇಕು. ಇದಾದ ನಂತರ ಯಾವುದೇ ಕಾಮಗಾರಿ ನಡೆಯಬೇಕಾಗಿದೆ. ಆದರೆ ಇಲ್ಲಿ ಅನುಮತಿ ಪಡೆಯದೆ ಕಾಮಗಾರಿ ನಡೆಸಲು ವನ್ಯಜೀವಿ ಅರಣ್ಯ ಇಲಾಖೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ. ಅಲ್ಲಿಗೆ ಕಾಮಗಾರಿಗೆ ನಿಂತಿದೆ. ಕಾಮಗಾರಿ ಉಸ್ತುವಾರಿ ವಹಿಸಿದ್ದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಯಾವುದೇ ಕಾನೂನಿನ ಪರಿಜ್ಞಾನ ಇಲ್ಲದೆ ಮೌನವಾಗಿದೆ. ಇನ್ನೂ ದಾಖಲೆಗಳನ್ನು ಕ್ರೋಡೀಕರಿಸಿ ಅರ್ಜಿ ಸಲ್ಲಿಸುವ ಗೋಜಿಗೆ ಹೋಗಲಿಲ್ಲ. ಅಂತೂ ಹಲವು ವರ್ಷಗಳ ಸೇತುವೆ ನಿರ್ಮಾಣದ ಕನಸು ನನಸಾಗುವುದು ಅನುಮಾನವಾಗಿದೆ.
ಒಟ್ಟಾರೆ ಕಾನೂನು , ಸರ್ಕಾರ, ಇಲಾಖೆಗಳ ನಡುವೆ ಅಮಾಯಕ ಆದಿವಾಸಿ ಕಾಡಿನ ಮಕ್ಕಳು ಹೈರಾಣಾಗಿ ರುವುದಂತು ಸತ್ಯ.

Related posts

ಬೆಳ್ತಂಗಡಿ: ಶೇಂದಿ ತೆಗೆಯುವ ವೇಳೆ ವ್ಯಕ್ತಿ ಮರದಿಂದ ಬಿದ್ದು ಸಾವು

Suddi Udaya

ಮಿತ್ತಬಾಗಿಲು :ರಮೇಶ್ ಗೌಡ ರವರ ಮನೆಗೆ ಶಾಸಕ ಹರೀಶ್ ಪೂಂಜ

Suddi Udaya

ಹುಣ್ಸೆಕಟ್ಟೆ: ತೀರ ಹದಗೆಟ್ಟ ರಸ್ತೆ: ಪ.ಪಂ. ಅಧ್ಯಕ್ಷ ಜಯಾನಂದ ರಿಂದ ಕೂಡಲೇ ಸ್ಪಂದನೆ

Suddi Udaya

ಮೈಸೂರು ಚಾಮರಾಜನಗರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಎರಡು ಸಾವಿರ ಮಂದಿಯಿಂದ ಧರ್ಮಸ್ಥಳ ಚಲೋ

Suddi Udaya

ನಾವೂರು : ಕುಂಬಾರ ಸ್ವಜಾತಿ ಬಾಂಧವರ ಜಿಲ್ಲಾ ಮಟ್ಟದ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ

Suddi Udaya

ನಡ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya
error: Content is protected !!