ನಾವೂರು: ಸೌರಮಾನ ಯುಗಾದಿ “ಪರಾಭವನಾಮ”ಸಂವತ್ಸರಾರಂಭ ಪ್ರಯುಕ್ತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಷು ಕಣಿ ದರ್ಶನ, ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ, ಸೌರಮಾನ ಯುಗಾದಿ ವಿಶೇಷ ಪೂಜೆ ಹಾಗೂ ವಿದ್ಯಾರ್ಥಿಗಳಿಗೆ ರಾಮಾಯಣ ಪುಸ್ತಕ ವಿತರಣಾ ಕಾರ್ಯಕ್ರಮವು ಎ.15ರಂದು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳ್ತಂಗಡಿ ಗುರುದೇವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಷು ಹಬ್ಬದ ಸಂದೇಶವನ್ನು ಹಾಗೂ ವಿಷು ಕಣಿಯ ಮಹತ್ವವನ್ನು ತಿಳಿಸಿಕೊಟ್ಟರು ಮತ್ತು ನಾವೂರಿನಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್, ನಾವೂರು ಇದರ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ನೆನಪಿಸಿ ಶುಭವನ್ನು ಕೋರಿ ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದಲ್ಲಿ ಧರ್ಮ ಶಿಕ್ಷಣ ಕಾರ್ಯಗಳು ಈ ಕ್ಷೇತ್ರದ ಮೂಲಕ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಪೂರ್ವಾಧ್ಯಕ್ಷರಾದ ಎ ಬಿ ಉಮೇಶ್ ಅತ್ಯಡ್ಕ, ಟ್ರಸ್ಟಿಗಳಾದ ಗಣೇಶ್ ಕಣಾಲು, ಗಣೇಶ್ ಗೌಡ , ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಎಸ್ ಎನ್ ಭಟ್, ಮೋಹನ್ ಬಂಗೇರ, ದೀನೇಶ್ ಗೌಡ ಮಲವಂತಿಗೆ, ಯತೀಶ್ ಕಣಾಲು, ಡಾ। ಕವಿತಾ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಪ್ರಧಾನ ಅರ್ಚಕರಾದ ದಿನೇಶ್ ಭಟ್ ವೈದಿಕ ವಿಧಿಗಳನ್ನು ನೆರವೇರಿಸಿಕೊಟ್ಟರು. ಡಾ। ಪ್ರದೀಪ್ ಆಟಿಕುಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣವನ್ನು ನಡೆಸಿದರು. ಸಾಮೂಹಿಕ ಪಠಣದಲ್ಲಿ ಅಂರ್ಜಾಲದ ಮೂಲಕವೂ ಬಹಳಷ್ಟು ಭಕ್ತರು ಭಾಗವಹಿಸಿದರು.












