ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಕುರಿತು ಮತ್ತು ಅಲ್ಲಿನ ವಿವಾಹಿತ ಮಹಿಳೆಯ ಬಗ್ಗೆ ಅವಹೇಳನಕಾರಿ ಅಸಭ್ಯ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಗಿರೀಶ್ ಮಟ್ಟಣ್ಣವರ್ ಮತ್ತು ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನಲ್ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎ.30 ರಂದು ಐಪಿಸಿ-1860(u/s-509,34) ಅಡಿಯಲ್ಲಿ ಝಿರೋ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಉಜಿರೆಯಲ್ಲಿ ಪಡೆದಿರುವುದರಿಂದ ಮುಂದಿನ ತನಿಖೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರವಾಗಲಿದೆ.
*ಪ್ರಕರಣದ ವಿವರ:* ಈ ಪ್ರಕರಣದ ದೂರುದಾರರಾದ ಕಾವೇರಿ ಕೇದಾರ್ ನಾಥ್ ಎಂಬವರು ದಿನಾಂಕ 30-04-2026 ರಂದು 8 ಗಂಟೆಗೆ ಬೆಂಗಳೂರು ನಗರದ ಮಲ್ಲೇಶ್ವರಂ ಉಪವಿಭಾಗ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ಹಾಜರಾಗಿ ದಿನಾಂಕ 20-08-2025 ರಂದು ನನ್ನ ನಿವಾಸ ರಾಜಾಜಿನಗರದಲ್ಲಿ “ಕುಡ್ಲ ರಾಂಪೇಜ್” ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರಗೊಂಡಿದ್ದ ಒಂದು ವಿಡಿಯೋವನ್ನು ವೀಕ್ಷಿಸಿರುತ್ತೇನೆ ಸದರಿ ವಿಡಿಯೋದಲ್ಲಿ ಗಿರೀಶ್ ಮಟ್ಟಣ್ಣವರ್ ದಿನಾಂಕ 04-12-2023 ರಂದು ಉಜಿರೆಯ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವುದು ಪ್ರಸಾರವಾಗಿರುತ್ತದೆ.ಸದರಿ ಭಾಷಣದಲ್ಲಿ… ಗಿರೀಶ್ ಮಟ್ಟಣ್ಣವರ್ ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಕುರಿತು ಹಾಗೂ ಅಲ್ಲಿನ ವಿವಾಹಿತ ಮಹಿಳೆಯರ ಕುರಿತು ಅತ್ಯಂತ ಅವಹೇಳನಕಾರಿ ಅಸಭ್ಯ, ಸುಳ್ಳು ಹಾಗೂ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿರುತ್ತಾರೆ.
ಅವರ ಹೇಳಿಕೆಗಳು ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟುಮಾಡುವಂತಿದ್ದು, ಸಮಾಜದಲ್ಲಿ ಆಶಾಂತಿ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿರುವಂತಿವೆ.ನಾನು ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಭಕ್ತೆಯಾಗಿದ್ದು, ಸದರಿ ಹೇಳಿಕೆಗಳಿಂದ ನನ್ನ ಧಾರ್ಮಿಕ ನಂಬಿಕೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ. ಅಲ್ಲದೆ ಮಹಿಳೆಯರ ಗೌರವ ಮತ್ತು ಮಾನಕ್ಕೆ ಅವಮಾನ ಉಂಟಾಗಿದ್ದು. ಈ ಹೇಳಿಕೆಗಳು ಸಮಸ್ಯೆ ಮಹಿಳಾ ಸಮುದಾಯದ ಮನಸ್ಸಿಗೆ ನೋವುಂಟುಮಾಡಿವೆ.ಇದರಿಂದ ಗಿರೀಶ್ ಮಟ್ಟಣ್ಣವರ್ ಮತ್ತು ಕುಡ್ಲ ರಂಪೇಜ್ ಯೂಟ್ಯೂಬ್ ಚಾನಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.














