
ಮರೋಡಿ: ಎಷ್ಟೇ ಶ್ರೀಮಂತಿಕೆ ಹೊಂದಿದ್ದರೂ ಮಾನಸಿಕ ನೆಮ್ಮದಿ ಲಭಿಸಲು ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಗತ್ಯವಿದೆ. ಅತೀ ಪುರಾತನ ಇತಿಹಾಸ ಇರುವ ಈ ಶ್ರದ್ಧಾಕೇಂದ್ರವನ್ನು ಅಭಿವೃದ್ಧಿ ಪಡಿಸಿ ನಮಗೆಲ್ಲ ಈ ಪುಣ್ಯಕಾರ್ಯದಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ. ಯುವಜನತೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕ ಸಂಭ್ರಮದ ಎ.30ರ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾನಂದ ಪೂಜಾರಿ ಅವರು ಮಾತನಾಡಿ ದೈವ-ದೇವರನ್ನು ಕಣ್ಣಾರೆ ಕಾಣಲು ಸಾಧ್ಯವಿಲ್ಲ. ಆದರೆ ಅವುಗಳ ಶಕ್ತಿಯನ್ನು ಗೋಚರಿಸಬಹುದು, ಅನುಭವಿಸಬಹುದು. ದೈವತ್ವದ ಆರಾಧನೆ ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆ ಎಂದರು.
ಪೊಸರಡ್ಕ ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಕೆ. ಬೆಳ್ಳಿಬೀಡು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಆಗಮಿಸಿದ್ದರು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಶ್ರೀ ಕ್ಷೇತ್ರ ಅರಮಲೆ ಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ಜ್ಯೋತಿ ಆರ್ ಸಾಲ್ಯಾನ್, ಯಮುನಾ ಗೋಪು ಪೂಜಾರಿ, ಸನತ್ ಕುಮಾರ್ ಹೆಗ್ಡೆ, ಉದ್ಯಮಿ ದಯಾನಂದ ಬಂಗೇರ, ಜಯರಾಜ್ ಕಾಬಯ ಅಂಗಡಿಬೆಟ್ಟು ಗುತ್ತು, ಬ್ರಹ್ಮ ಕುಂಭಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೀತಲ್ ಜೈನ್, ಸದಾನಂದ ಹೆಗ್ಡೆ ಕೋಡಿಚ್ಚೂರು, ಯಂ. ಪದ್ಮರಾಜ ಶೆಟ್ಟಿ, ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ದಿವಾಕರ ಹೆಗ್ಡೆ, ದೇಜಮ್ಮ ಗಾಂದ್ಯೊಟ್ಟ, ಸನತ್ ಕುಮಾರ್ ಜೈನ್, ಶಶಿಕಾಂತ್ ಜೈನ್, ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು, ಗೌರವಾಧ್ಯಕ್ಷ ರಾಜೇಂದ್ರ ಬಳ್ಳಾಲ್, ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಪೂಜಾರಿ, ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ:
ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಸದಾನಂದ ಪೂಜಾರಿ, ಜಯರಾಜ ಕಾಬಯ ಅಂಗಡಿಬೆಟ್ಟು ಗುತ್ತು ಮರೋಡಿ, ಸದಾನಂದ ಹೆಗ್ಡೆ ಕೋಡಿಚೂರು ಮರೋಡಿ, ಯಂ. ಪದ್ಮರಾಜ ಶೆಟ್ಟಿ ನಿವೃತ್ತ ಅಧ್ಯಾಪಕರು ಚಂದ್ರ ವಿಹಾರ ಮರೋಡಿ ಹಾಗೂ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ದಿವಾಕರ ಹೆಗ್ಡೆ ಮಯೂರ ನಡುಚೂರು ಮರೋಡಿ ಅವರನ್ನು ಸನ್ಮಾನಿಸಲಾಯಿತು.
ಮಾನ್ವಿ, ಸಂತೋಷ್ ಪ್ರಾರ್ಥಿಸಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಶುಭರಾಜ್ ಹೆಗ್ಡೆ ಸ್ವಾಗತಿಸಿ, ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ಆದಿತ್ಯ ಪಿ.ಕೆ. ಪ್ರಾಸ್ತಾವಿಸಿದರು. ಮಾನಸ ಶೀತಲ್ ಜೈನ್ ವಂದಿಸಿದರು. ಪ್ರಶಾಂತ್, ಸೌಮ್ಯ ಕೋಟ್ಯಾನ್ ಕೋಟೆಬಾಗಿಲು ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಕುಂಭಾಭಿಷೇಕ ಸಮಿತಿ ಸದಸ್ಯರು ಸಹಕರಿಸಿದರು.
ಬ್ರಹ್ಮಕುಂಭಾಭಿಷೇಕ:
ಬೆಳಿಗ್ಗೆ ಪುನರ್ ಪ್ರತಿಷ್ಠಾಪಿಸಲಾದ ಪರಿವಾರ ದೈವಗಳಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿತು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಭರತನಾಟ್ಯ ಹಾಗೂ ಜಾನಪದ ನೃತ್ಯ ನಡೆಯಿತು. ರಾತ್ರಿ ಶ್ರೀ ದೈವದ ನೇಮೋತ್ಸವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಗಳ ನೇಮೋತ್ಸವ ನಡೆಯಿತು.
ಇಂದಿನ (ಎ.1) ಕಾರ್ಯಕ್ರಮ:
ಸಂಜೆ 5-30ರಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡುಬಿದಿರೆ ಪ್ರಸ್ತುತ ಪಡಿಸುವ ಸಿಂಧೂರ ಸಂಗ್ರಾಮ ಯಕ್ಷಗಾನ ನಡೆಯಲಿದೆ. ಸಂಜೆ 7-30ರಿಂದ ನಡೆಯಲಿರುವ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ವೇ.ಮೂ. ಕೆ. ಅನಂತ ಅಸ್ರಣ್ಣರು ಕೇಳ, ಎಸ್ಕೆಡಿಆರ್ಡಿಪಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್., ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿ ಮೋಹನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 10-00 ಗಂಟೆಯಿಂದ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ಹಾಗೂ ಶ್ರೀ ಮಾಯಂದಾಲೆ ನೇಮೋತ್ಸವ ಜರಗಲಿದೆ.













