ಬೆಳ್ತಂಗಡಿ : ‘ಬ್ರಹ್ಮ ಶ್ರೀ ನಾರಾಯಣ ಗುರುಗಳು ಹಿಂದುಳಿದ ಸಮಾಜಕ್ಕೆ ಬದುಕು ನೀಡಿದವರು. ಅವರ ವಿಚಾರಗಳಿಗೆ ಹಾನಿಯಾಗುವ ಯಾವುದೇ ಕೃತ್ಯ ಸಮಾಜದಲ್ಲಿ ನಡೆದರೂ ಒಗ್ಗಟ್ಟಾಗಿ ಪ್ರತಿಭಟಿಸುವ, ಆ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಬಿಲ್ಲವರಾದಿಯಾಗಿ ಸಮಸ್ತ ಹಿಂದುಳಿದ ಸಮಾಜ ಮಾಡಬೇಕಾಗಿದೆ’ ಎಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಉಪನ್ಯಾಸಕ ಗಣೇಶ್ ಬಿ ಶಿರ್ಲಾಲು ಹೇಳಿದರು.

ಅವರು ಮೇ 12ರಂದು ಲಾಯಿಲ ಪಡ್ಲಾಡಿ ಅಜೆಕಲ್ ಶ್ರೀ ಜಯ ದುರ್ಗಾ ಕೃಪಾ ನಿವಾಸದ ಆವರಣದಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಲಾಯಿಲ ಇದರ ನೇತೃತ್ವದಲ್ಲಿ ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಲಾಯಿಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜನ್ಮ ಜಯಂತಿಯ ಪ್ರಯುಕ್ತ ನಡೆದ ಗುರುಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು.
‘ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ನಾರಾಯಣ ಗುರುಗಳು ಮೂಡಿಸಿದ ಅರಿವು ಸಮಾಜದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ. ಸಮಾಜ ಪರಿವರ್ತನೆಯ ಹರಿಕಾರರಾಗಿ ಅವರು ಮಾಡಿದ ಕಾರ್ಯಗಳು ನಮ್ಮ ಬದುಕಿನುದ್ದಕ್ಕೂ ಮಾರ್ಗದರ್ಶಕವಾಗಿದೆ. ನಾರಾಯಣ ಗುರುಗಳ ಹೆಸರಿನಲ್ಲಿ ಕಾಣಿಸಿಕೊಂಡ ಪ್ರತಿ ಸಂಘಗಳು ಸಂಘಟನೆಯ ಜತೆ ಸಕರಾತ್ಮಕ ಚಿಂತನೆ ಬೆಳೆಸಿಕೊಂಡು ಸಮಾಜವನ್ನು ಬೆಳೆಸುವ ಕಾರ್ಯವನ್ನು ಮಾಡುವಂತಾಗಬೇಕು’ ಎಂದರು.

ಸಂಘದ ಅಧ್ಯಕ್ಷ ಬಿ. ಲಕ್ಷ್ಮಣ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬಿಲ್ಲವ ಸಮಾಜ ಸೇರಿದಂತೆ ತಳ ಸಮುದಾಯದ ಪಾಲಿಗೆ ಆರಾಧ್ಯ ಶಕ್ತಿ ನಾರಾಯಣ ಗುರುಗಳು. ಲಾಯಿಲದಲ್ಲಿ ಬಿಲ್ಲವ ಸಮಾಜದ ಸೀಮಿತ ಮನೆಗಳಿದ್ದರೂ ಆ ಮನೆಯವರು ಒಟ್ಟು ಸೇರಿಕೊಂಡು ಸಮಾಜವನ್ನು ಒಂದಾಗಿಸುವ ಕಾರ್ಯವನ್ನು ಮಾಡುತ್ತ ಬರುತ್ತಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದರು.
ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಆನಂದ ಪೂಜಾರಿ ನಿನ್ನಿಕಲ್ಲು, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಚಂದ್ರಶೇಖರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಅಶೋಕ್ ಕುಮಾರ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರೇಖಾ, ಸಂಘದ ನಿಯೋಜಿತ ಅಧ್ಯಕ್ಷ ಶೈಲೇಶ್ ಆರ್. ಜೆ., ನಿಯೋಜಿತ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರವಿಚಂದ್ರ ನಾಡೆಂಜ ಹಾಗೂ ನಿಯೋಜಿತ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಜಯಂತಿ ಅನ್ನಡ್ಕ ಇದ್ದರು.
ಸಂಘದ ಕೋಶಾಧಿಕಾರಿ ಭೋಜರಾಜ್ ಪೆಳತ್ತಡಿ, ಕಾರ್ಯದರ್ಶಿ ಸೌಮ್ಯ ಲಾಯಿಲ, ನಿಯೋಜಿತ ಕಾರ್ಯದರ್ಶಿ ಜಯಂತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಸಹಕರಿಸಿದರು.
ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ನಿಯೋಜಿತ ನಿರ್ದೇಶಕಿ ಗೀತಾ ಪಡ್ಲಾಡಿ ವಂದಿಸಿದರು.













