ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಗೆ ಥೈಲ್ಯಾಂಡ್ ರಾಷ್ಟ್ರೀಯ ಕಬಡ್ಡಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ತರಬೇತುದಾರರಾದ ರವೀಂದ್ರ ಶೆಟ್ಟಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಸ್ವಾಗತಿಸಿದರು.
ಎರಡು ದಶಕಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ತರಬೇತುದಾರರಾಗಿರುವ ಇವರು 2001 ರಿಂದ 2019 ರವರೆಗೆ ಕರ್ನಾಟಕ ರಾಜ್ಯ ಕಬಡ್ಡಿ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ ಇರಾನ್ನಲ್ಲಿ ನಡೆದ ಜೂನಿಯರ್ ಕಬಡ್ಡಿ ವಿಶ್ವಕಪ್ನಲ್ಲಿ ಭಾರತೀಯ ಜೂನಿಯರ್ ಕಬಡ್ಡಿ ತಂಡದ ಮುಖ್ಯ ಕೋಚ್ ಆಗಿ ಆಗಿದ್ದರು. 2023 ರಲ್ಲಿ ಹ್ಯಾಂಗ್ಝೌ ಏಷ್ಯನ್ ಗೇಮ್ಸ್,
ಬಾಂಗ್ಲಾದೇಶದ ಬಂಗಬಂಧು ಕಪ್ ಹಾಗೂ 2025ರಲ್ಲಿ ಧಾಕಾ ದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಸೇರಿದಂತೆ ಮುಂತಾದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೂರ್ನಮೆಂಟ್ಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
2025ರಲ್ಲಿ ವರ್ಲ್ಡ್ ಸೂಪರ್ ಕಬಡ್ಡಿ ಲೀಗ್ (WSKL) ನ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಂಡ ಇವರು, ಲೀಗ್ನ ತಾಂತ್ರಿಕ ವಿನ್ಯಾಸ, ಸ್ಪರ್ಧಾ ಮಾದರಿ, ಹಾಗೂ ರೆಫರಿ ಮತ್ತು ಕೋಚ್ ಅಭಿವೃದ್ಧಿ ಕಾರ್ಯಕ್ರಮಗಳ ರೂಪಿಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಭೇಟಿ ವೇಳೆ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ತನ್ನ ಕ್ರೀಡಾ ಸಂಘದ ಮೂಲಕ ಕ್ರೀಡಾ ಕ್ಷೇತ್ರಕ್ಕೆ ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಪ್ರಸ್ತುತ ಯುಪಿ ಯೋಧ ತಂಡವನ್ನು ಪ್ರತಿನಿಧಿಸುತ್ತಿರುವ ಗಗನ್ ಗೌಡ ಸೇರಿದಂತೆ 6 ವಿದ್ಯಾರ್ಥಿಗಳು ಪ್ರೋ ಕಬ್ಬಡಿಯಂತ ಪಂದ್ಯಾವಳಿಲ್ಲಿ ಯಶಸ್ವಿಯಾಗಿ ಸ್ಥಾನ ಪಡೆದಿರುವುದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಸಂಸ್ಥೆಯು ಶೈಕ್ಷಣಿಕ ಸಾಧನೆಯ ಜೊತೆಗೆ ಮತ್ತಷ್ಟು ಕ್ರೀಡಾ ಪಟುಗಳು ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಭೇಟಿಯ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸೇರಿದಂತೆ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಕಬ್ಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್, ಸಾರ್ವಜನಿಕ ಸಂಪರ್ಕ ಮತ್ತು ಸಮೂಹ ಮಾಧ್ಯಮಗಳ ಸಂಯೋಜಕ ಅರವಿಂದ್ ಉಪಸ್ಥಿತರಿದ್ದರು.












