ಬೆಳ್ತಂಗಡಿ: ಮಳೆಗಾಲ ಆರಂಭಕ್ಕೆ ಮೊದಲು ಅಡಕೆ ಕೃಷಿಕರು ಬೋರ್ಡೋ ದ್ರಾವಣವನ್ನು ತೋಟಗಳಿಗೆ ಸಿಂಪಡಣೆ ಮಾಡಬೇಕಿದೆ. ಕಳೆದ ವರ್ಷ ಅಡಕೆ ಫಸಲು ತೀವ್ರ ಕಡಿಮೆ ಇತ್ತು. ಕಳೆದ ವರ್ಷ ಮೈಲುತುತ್ತು ದರ ಕೆ.ಜಿ.ಯೊಂದಕ್ಕೆ ಕನಿಷ್ಠ 270 ರಿಂದ 350 ರೂ.ವರೆಗೆ ಇತ್ತು. ಪ್ರಸ್ತುತ ಕನಿಷ್ಠ 450 ರಿಂದ 500 ರೂ. ರವರೆಗೆ ದರ ತೀವ್ರ ಏರಿಕೆಯಾಗಿರುವುದು ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಡಿಕೆ ಬೆಳೆಯನ್ನು ಬಾಧಿಸುವ ಕೊಳೆರೋಗ ಮತ್ತು ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಬೆಳೆಗಾರರು ಮಳೆಗಾಲದಲ್ಲಿ ಸಿಂಪಡಣೆ ಮಾಡುತ್ತಿರುವ ಬೋರ್ಡೋ ದ್ರಾವಣಕ್ಕೆ ಬಳಸುವ ಮೈಲುತುತ್ತು ದರ ಕಳೆದ ವರ್ಷಕ್ಕಿಂತ ಒಂದೂವರೆ ಪಟ್ಟು ಹೆಚ್ಚಳವಾಗಿದ್ದು ರೈತರಿಗೆ ಹೊಡೆತ ಬಿದ್ದಿದೆ.
ಮಳೆಗಾಲದಲ್ಲಿ ಅಡಕೆಗೆ ಕೊಳೆ ರೋಗ ಬಾಧಿಸುವುದರಿಂದ ಬೆಳೆಗಾರರು ಪೂರ್ವಭಾವಿಯಾಗಿ ಮೇ ತಿಂಗಳ ಅಂತ್ಯದಲ್ಲಿ ಮೈಲುತುತ್ತು ಮತ್ತು ಸುಣ್ಣ ಮಿಶ್ರಣ ಸಿಂಪಡಣೆಗೆ ಸಿದ್ಧವಾಗುತ್ತಾರೆ. ಇದಕ್ಕಾಗಿ ಮೇ ಮೊದಲ ವಾರದಿಂದಲೇ ಕೃಷಿಕರು ಮೈಲುತುತ್ತು ದಾಸ್ತಾನು ಮಾಡಲು ಆರಂಭಿಸುತ್ತಾರೆ. ಸಾಧಾರಣವಾಗಿ ಜೂನ್ ತಿಂಗಳಿನ ಆರಂಭದಲ್ಲಿ ಮುಂಗಾರು ಮಳೆ ಶುರುವಾಗುತ್ತಿದ್ದು ಇದರೊಂದಿಗೆ ಕೃಷಿಕರು ಬೋರ್ಡೋ ದ್ರಾವಣ ಸಿಂಪಡಿಸುತ್ತಾರೆ. ಜೂನ್ನಿಂದ ಸೆಪ್ಟೆಂಬರ್ ವರೆಗೆ ಕನಿಷ್ಟ ಮೂರು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡುತ್ತಿದ್ದು ಅಡಕೆ ಕೊಳೆ ರೋಗ ಉಲ್ಬಣಿಸಿದರೆ, ಕೆಲವರು ನಾಲ್ಕು ಬಾರಿಯೂ ಔಷಧ ಸಿಂಪಡಣೆ ಮಾಡುತ್ತಾರೆ.
ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಅನುಮತಿ ಪಡೆದ ಅಧಿಕೃತ ಮಾರಾಟಗಾರರ ಅಂಗಡಿಗಳಲ್ಲಿ ಮಾತ್ರ ಮೈಲುತುತ್ತು ಸಿಗುತ್ತದೆ. ಈ ಬಾರಿ ಹೆಚ್ಚಿನ ಅಂಗಡಿಗಳಲ್ಲಿ ಮೈಲುತುತ್ತು ಬೇಡಿಕೆಯಷ್ಟು ಪೂರೈಕೆ ಲಭ್ಯವಾಗುತ್ತಿಲ್ಲ.
ಬೆಲೆ ಏರಿಕೆ ಕಾರಣವಾಯಿತೆ!: ತಾಮ್ರದ ದರ ಏರಿಕೆಯಾಗಿರುವ ಕಾರಣ ಮೈಲುತುತ್ತು ದರ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು 25 ಕ್ಕೂ ಹೆಚ್ಚು ಕಂಪನಿಗಳ ಮೈಲುತುತ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳಲ್ಲಿ ೧೦ರಷ್ಟು ಕಂಪನಿಗಳ ಮೈಲುತುತ್ತಿಗೆ ಬೇಡಿಕೆ ಹೆಚ್ಚಿದ್ದು ಮುಂಗಾರು ಪೂರ್ವದಲ್ಲಿ ತಾಲೂಕಿನಲ್ಲಿಯೇ ಅಂದಾಜು ೧೦೦ ಟನ್ನಷ್ಟು ಮಾರಾಟವಾಗುತ್ತದೆ. ದರ ಇನ್ನೂ ಹೆಚ್ಚಾಗಬಹುದೆಂಬ ಆತಂಕ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದೆಂಬ ಭಯದಿಂದ ಕೃಷಿಕರು ಈಗಾಗಲೇ ಮೈಲುತುತ್ತು ದಾಸ್ತಾನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಮೈಲುತುತ್ತು ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಸಿಗದ ಪೆಟ್ರೋಲ್: ಕಳೆದ ಬಾರಿ ಅತೀವ ಮಳೆಯಿಂದ ನಲ್ಲಿಗಳು ಹುದರಿ ಫಸಲು ಕಡಿಮೆ ಲಭಿಸಿತ್ತು. ಇದೀಗ ಆಗಾಗ ಮಳೆ ಸುರಿಯುತ್ತಿದ್ದು ಕೃಷಿಕರು ಮದ್ದು ಸಿಂಪಡಣೆಗೆ ತಯಾರಿ ನಡೆಸುತ್ತಿದ್ದಾರೆ. ತೋಟದಲ್ಲಿ ಮದ್ದು ಸಿಂಪಡಣೆಗೆ ಕಾರ್ಮಿಕರ ಕೊರತೆ ಒಂದೇಡೆಯಾದಲ್ಲಿ ಪೆಟ್ರೋಲ್ ಚಾಲಿತ ಸ್ಟೇಯರ್ ಬಳಸುತ್ತಿದ್ದು ಅವುಗಳಿಗೂ ಪೆಟ್ರೋಲ್ ಬಂಕ್ಗಳಲ್ಲಿ ಬಾಟಲಿಗಳಲ್ಲಿ ಸಿಗದೇ ಆತ ಮತ್ತಷ್ಟು ಹೈರಾಣಾಗುತ್ತಿದ್ದಾರೆ.
ಈ ಬಾರಿ ಮೈಲುತುತ್ತು ದರ ಕೆ.ಜಿ.ಯಲ್ಲಿ 200 ರೂ.ನಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಮೈಲುತುತ್ತು ದರ ಕೆ.ಜಿ.ಯೊಂದಕ್ಕೆ ಕನಿಷ್ಠ 270 ರಿಂದ 350ರೂ.ವರೆಗೆ ಇತ್ತು. ಪ್ರಸ್ತುತ ಕನಿಷ್ಠ 450 ರಿಂದ 500 ರೂ. ರವರೆಗೆ ಏರಿಕೆಯಾಗಿದೆ. ಅಲ್ಲದೆ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯೂ ಇಲ್ಲದಿರುವುದು ಅಡಕೆ ಬೆಳೆಗಾರರನ್ನು ಕಂಗೆಡಿಸಿದೆ. ಹೆಚ್ಚಿನ ಸಹಕಾರಿ ಸಂಘಗಳಲ್ಲಿ ಮೈಲುತುತ್ತು ಸಾಮಾನ್ಯ ಪ್ರಮಾಣದಲ್ಲಿ ಲಭ್ಯವಿದೆ.












